ಡಾ. ಎಕೆ ಖಾಸಿಮ್ ನಿಧನ
ಮಂಗಳೂರು : ಪ್ರತಿಷ್ಠಿತ ಕಂಬಾರ್ ಮನೆತನದ, ಕೈಕಂಬದಲ್ಲಿ ಬಡ ರೋಗಿಗಳಿಗೆ ನೆರವಾಗುತ್ತಿದ್ದ ಡಾ. ಎ.ಕೆ. ಖಾಸಿಮ್ (51) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಸೌದಿ ಅರೇಬಿಯಾದ ಮಕ್ಕಾ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ.
ಮಕ್ಕಾ ನಗರದ ಝಹ್ರತುಲ್ ಕುದಾಯಿ ಏಷಿಯನ್ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಡಾ. ಎ.ಕೆ. ಖಾಸಿಮ್ ಅವರು ಪ್ರಸ್ತುತ ಮಂಗಳೂರಿನ ಫಳ್ನೀರ್ ನಲ್ಲಿ ಕುಟುಂಬ ಸಹಿತ ವಾಸ ಮಾಡುತ್ತಿದ್ದರು. ಮಂಗಳೂರು ಕೆ.ಎಂ.ಸಿ.ಯಲ್ಲಿ ಎಂಬಿಬಿಎಸ್ ಮುಗಿಸಿ ಎಮರ್ಜೆನ್ಸಿ ಹೆಲ್ತ್ ಕೋರ್ಸ್ ಮಾಡಿದ್ದರು. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದರು. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸಹಪಾಠಿಯಾಗಿದ್ದ ಖಾಸಿಮ್ ಅವರ ಜೊತೆ ಅನ್ಯೋನ್ಯವಾಗಿದ್ದರು. ಖಾಸಿಮ್ ಅವರು ಸಂಘಟನಾತ್ಮಕವಾಗಿ ತೊಡಗಿಸಿಕೊಂಡಿದ್ದು, ಮಂಗಳೂರು ಎಂ.ಫ್ರೆಂಡ್ಸ್ ಇದರ ಸದಸ್ಯರಾಗಿದ್ದು, ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ದಿವಂಗತ ಕೋಡೋತ್ ಗೋವಿಂದನ್ ನಾಯರ್, ಸಿ.ಕೆ ಶ್ರೀಧರನ್, ಯು.ಟಿ.ಖಾದರ್ ಅವರ ಆಪ್ತರಾಗಿದ್ದರು.
ಅವರು ಕಾಸರಗೋಡು ಡಿಸಿಸಿ ಸದಸ್ಯರಾಗಿದ್ದರು. ಮಂಗಲ್ಪಾಡಿ ಅರ್ಬನ್ ಸೇವಾ ಸಹಕಾರಿ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿದ್ದ ಡಾ. ಖಾಸಿಮ್ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದರು. ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರಾದ ಡಾ. ಕಾಮಿಲ್, ಎಂಬಿಬಿಎಸ್ ವಿದ್ಯಾರ್ಥಿ ಶಾಮಿಲ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.