ಶೀಂಬ್ರ ಕೃಷ್ಣಾಂಗಾರಕ ಸ್ನಾನಘಟ್ಟಕ್ಕೆ ಶಿಲಾನ್ಯಾಸ
ಉಡುಪಿ, ಮಾ.20: ಉಡುಪಿಯ ಜೀವನದಿ ಎನಿಸಿರುವ ಸ್ವಣಾ ನದಿ ತೀರದಲ್ಲಿ ಸುಸಜ್ಜಿತ ಕೃಷ್ಣಾಂಗಾರಕ ಸ್ನಾನ ಘಟ್ಟ ನಿರ್ಮಾಣಕ್ಕೆ ಚಾಲನೆ ದೊರೆತಿರುವುದು ಉಡುಪಿಯ ಧಾರ್ಮಿಕ ಪ್ರವಾಸೋದ್ಯಮದ ಪ್ರಗತಿಯಲ್ಲಿ ಒಂದು ಮಹತ್ವದ ಹೆಜ್ಜೆ ಎಂದು ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥರು ಹೇಳಿದ್ದಾರೆ.
ಮಣಿಪಾಲ ಸಮೀಪದ ಪೆರಂಪಳ್ಳಿ ಶೀಂಬ್ರ ಸಿದ್ಧಿವಿನಾಯಕ ದೇವಸ್ಥಾನದ ಸಮೀಪ ಸ್ವರ್ಣಾನದಿ ತೀರದಲ್ಲಿ ನೂತನ ಕೃಷ್ಣಾಂಗಾರಕ ಸ್ನಾನಘಟ್ಟ ನಿರ್ಮಾಣಕ್ಕೆ ಶನಿವಾರ ಬೆಳಿಗ್ಗೆ ಶಿಲಾನ್ಯಾಸ ನೆರವೇರಿಸಿ ಅವರು ಸಂದೇಶ ನೀಡಿ ಮಾತನಾಡಿದರು.
ಪವಿತ್ರವಾದ ಈ ಸ್ಥಳಕ್ಕೆ ವರ್ಷಂಪ್ರತಿ ತೀರ್ಥಸ್ನಾನಕ್ಕೆಂದು ನಾಡಿನ ಅನೇಕ ಭಾಗಗಳಿಂದ ಸಾವಿರಾರು ಭಾವುಕ ಜನ ಆಗಮಿಸುತ್ತಾರೆ. ಆದರೆ ಇಲ್ಲಿ ಸುಸಜ್ಜಿತ ಸ್ನಾನಘಟ್ಟದ ಕೊರತೆ ಇತ್ತು. ಅನೇಕ ವರ್ಷಗಳ ಪ್ರಯತ್ನದ ಬಳಿಕ ರಾಜ್ಯ ಸರಕಾರ ಸಣ್ಣ ನೀರಾವರಿ ಇಲಾಖೆಯ ಮೂಲಕ ಒಂದು ಕೋಟಿ ರೂ. ಅನುದಾನ ನೀಡಿ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿರುವುದು ಒಳ್ಳೆಯ ವಿಚಾರ. ಇ ದಕ್ಕಾಗಿ ಮುಖ್ಯಮಂತ್ರಿ, ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಹಾಗೂ ಶಾಸಕ ಕೆ. ರಘುಪತಿ ಭಟ್ ಅಭಿನಂದನೀಯರು ಎಂದರು.
ಮಠದ ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿ ಧಾರ್ಮಿಕ ವಿಧಿ ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಸದಸ್ಯರಾದ ಅರುಣಾ ಸುಧಾಮ, ಬಾಲಕೃಷ್ಣ ಶೆಟ್ಟಿ, ಗಿರಿಧರ ಆಚಾರ್ಯ, ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಮಾಜಿ ನಗರಸಭಾಧ್ಯಕ್ಷ ಹೆರ್ಗ ದಿನಕರ ಶೆಟ್ಟಿ , ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶೇಷಕೃಷ್ಣ , ಜೂನಿಯರ್ ಇಂಜಿನಿಯರ್ ಹರೀಶ್, ಕೃಷ್ಣಮೂರ್ತಿ ಶಿವತ್ತಾಯ, ಮಧ್ವೇಶ ತಂತ್ರಿ, ವಾಸುದೇವ ಭಟ್ ಪೆರಂಪಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.