ಲಾಕ್ಡೌನ್; ಭಟ್ಕಳದಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ರದ್ದು
ಭಟ್ಕಳ: ಕೊರೋನ ಎರಡನೆ ಅಲೆ ಹಿನ್ನೆಲೆಯಲ್ಲಿ ಕರ್ಫ್ಯೂ ಮತ್ತು ಲಾಕ್ಡೌನ್ ನಿಂದಾಗಿ ಶುಕ್ರವಾರ ನಡೆಯಬೇಕಾಗಿದ್ದು ಸಾಮೂಹಿಕ ಪ್ರಾರ್ಥನೆಯನ್ನು ರದ್ದುಪಡಿಸಿ ಸರ್ಕಾರದ ನಿಯಮದಂತೆ ಐದಾರು ಜನರನ್ನೊಳಗೊಂಡಂತೆ ಮಸೀದಿಯಲ್ಲಿ ಮಧ್ಯಾಹ್ನದ ಪ್ರಾರ್ಥನೆ ಮಾತ್ರ ಸಲ್ಲಿಸಲಾಗುವುದು ಎಂದು ಧಾರ್ಮಿಕ ವಿದ್ವಾಂಸರ ಹಾಗೂ ಗಣ್ಯರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಸಭೆಯಲ್ಲಿ ಉಪಸ್ಥಿತ ನಗರದ ಖಾಜಿಗಳೊಂದಿಗೆ ಸಮಾಲೋಚನೆ ನಡಸಿದ ತಂಝೀಮ್ ಮುಖಂಡರು ಅವರ ಮಾರ್ಗದರ್ಶನ ದಲ್ಲಿ ಉಳಿದ ದಿನಗಳಂತೆ ಶುಕ್ರವಾರದಂದು ವಿಶೇಷ ಪ್ರಾರ್ಥನೆ ಸಲ್ಲಿಸದೆ ಝಹರ್ ನಮಾಝ್ ನಿರ್ವಹಿಸಲಾಗುವುದು ಎಂದು ನಿರ್ಣಯಿಸಲಾಗಿದೆ. ಕೋವಿಡ್ ಮಾರ್ಗಸೂಚಿಯಂತೆ ಇಮಾಮ್, ಮುಅಝ್ಝಿನ್ ಮತ್ತು ಇಬ್ಬರು ಅಥವಾ ಮೂವರು ವ್ಯಕ್ತಿಗಳೊಂದಿಗೆ ನಮಾಝ್ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತಂಝೀಮ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಜೆ ಅಬ್ದುಲ್ ರಕೀಬ್ ನದ್ವಿ ಕರೋನಾ ಕರ್ಫ್ಯೂ ಅಥವಾ ಕರೋನಾ ಲಾಕ್ಡೌನ್ ಅನ್ನು ಗಮನದಲ್ಲಿಟ್ಟುಕೊಂಡು ಸಭೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ, ನಂತರ ಸೂಚನೆಗಳನ್ನು ಅನುಸರಿಸಿ ಕೇವಲ ಇಬ್ಬರು ಅಥವಾ ಮೂರು ಸಿಬ್ಬಂದಿ ಸದಸ್ಯರು ಮಸೀದಿಗಳಲ್ಲಿ ಪ್ರತಿದಿನ ಐದು ಹೊತ್ತಿನ ಪ್ರಾರ್ಥನೆಗಳನ್ನು ಸಲ್ಲಿಸಲಿದೆ. ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಸಭೆಯಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝಿಮ್ ಸಂಸ್ಥೆಯ ಮುಖಂಡರು, ನಗರದ ಗಣ್ಯರು, ಪುರಸಭೆ, ಪಂಚಾಯತ್ ಸದಸ್ಯರು ಭಾಗವಹಿಸಿದ್ದರು.