ಸೌಕೂರು ಏತ ನೀರಾವರಿಯ ಮೂಲ ಸ್ವರೂಪ ಬದಲಾಯಿಸಿ ರೈತರಿಗೆ ಅನ್ಯಾಯ: ಶರತ್ ಕುಮಾರ್ ಶೆಟ್ಟಿ ಆಕ್ರೋಶ
ಕುಂದಾಪುರ ಮೇ 27: ಸೌಕೂರು ಏತ ನೀರಾವರಿಯ ಮೂಲ ನಕ್ಷೆಯನ್ನು ಬದಲಾಯಿಸಿ ನೆಂಪುವಿನ ಕಡೆಗೆ ಪೈಪ್ಲೈನ್ ಸಾಗುತ್ತಿದ್ದು, ಇದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದು ತ್ರಾಸಿ ವಲಯ ರೈತ ಸಂಘದ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿ ಪ್ರಾರಂಭದ ವೇಳೆ ಸೌಕೂರು, ಗುಲ್ವಾಡಿ, ಹಟ್ಟಿಯಂಗಡಿ, ಕಟ್ಬೆಲ್ತೂರು ಒಳಗೊಂಡಂತೆ ನಕ್ಷೆಯನ್ನು ರೂಪಿಸಲಾಗಿತ್ತು. ಆದರೆ ಈಗ ಪೈಪ್ಲೈನ್ಗಳು ನೆಂಪು ಕಡೆಗೆ ತಿರುಗುತ್ತಿದೆ ಎಂದವರು ಆರೋಪಿಸಿದರು.
ಹಿಲ್ಕೋಡು ಪ್ರದೇಶಕ್ಕೆ ನೀರು ಹಾಯಿಸಿದರೆ 100 ಹೆಕ್ಟೇರ್ ಕೃಷಿ ಭೂಮಿಗೆ ಉಪಯೋಗವಿದೆ. ಆದರೆ ಯಾವುದೋ ಒಂದು ಹಿತಾಶಕ್ತಿ ರೈತರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದವರು ತಿಳಿಸಿದರು.
ಮೂಲ ಯೋಜನೆಯಂತೆ ಅಚ್ಚುಕಟ್ಟು ಪ್ರದೇಶಕ್ಕೆ ಈ ನೀರನ್ನು ಹಾಯಿಸು ವುದಕ್ಕೆ ಈ ಯೋಜನೆಯಲ್ಲಿ ರೂಪಿತಗೊಂಡಂತ ಕಾಮಗಾರಿಗಳು ಏನಿವೆಯೋ ಅವುಗಳನ್ನು ಪೂರ್ಣ ಗೊಳಿಸಿದ ಬಳಿಕ ಮುಂದಿನ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಇಲಾಖೆ ಅಧಿಕಾರಿಗಳಲ್ಲಿ ಕೇಳಿಕೊಳ್ಳುತ್ತೇವೆ ಎಂದು ಶರತ್ಕುಮಾರ್ ಶೆಟ್ಟಿ ನುಡಿದರು.
ಹಿಲ್ಕೋಡು ಪ್ರದೇಶಕ್ಕೆ ನೀರು ಹಾಯಿಸಿದರೆ ಆಸುಪಾಸಿನ 100 ಹೆಕ್ಟೇರ್ ಕೃಷಿ ಭೂಮಿಗೆ ಉಪಯೋಗವಿದೆ. ಆದರೆ ಇವತ್ತು ನೋಡಿದ್ರೆ ಇದನ್ನು ಬಿಟ್ಟು ನೆಂಪುವಿನ ಕಡೆಗೆ ಪೈಪ್ಲೈನ್ ಸಾಗುತ್ತಿದ್ದು ಮೂಲ ಯೋಜನೆಯಲ್ಲಿರುವ ಕಾಮಗಾರಿಯನ್ನು ಬದಿಗೆ ಇಟ್ಟಂತೆ ಕಾಣುತ್ತಿದೆ. ಈ ಕೊರೋನಾ ಸಂದರ್ಭದಲ್ಲಿ ಯಾವುದೇ ಒಬ್ಬ ಜನಪ್ರತಿನಿಧಿಯಲ್ಲಿ ಅಥವಾ ಯಾವುದೇ ಅಧಿಕಾರಿಗಳಲ್ಲಿ ರೈತರ ಬೇಡಿಕೆಗಳನ್ನು ಇಡಲು ಅವಕಾಶ ಇಲ್ಲದೆ ಇರುವುದರಿಂದ ಮಾಧ್ಯಮಗಳ ಮೂಲಕ ಈ ಮನವಿ ಮಾಡಿಕೊಳ್ಳುತಿದ್ದೇನೆ ಎಂದರು.
ಸರಕಾರದಿಂದ ರೈತರಿಗೆ ಏನಾದರೂ ಅನ್ಯಾಯವಾದರೇ ಮುಂದಿನ ದಿನಗಳಲ್ಲಿ ಕರ್ಕುಂಜೆ ಹಾಗೂ ತ್ರಾಸಿ ಭಾಗದ ರೈತರೊಂದಿಗೆ ಉಗ್ರ ಹೋರಾಟ ಮಾಡಲಾ ಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ತ್ರಾಸಿ ರೈತ ಸಂಘದ ಉಪಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.