ಲಸಿಕೆ ನೀಡಿದ ಬಳಿಕ ಪರೀಕ್ಷೆ ಮಾಡಿಸಿ: ಎನ್ಎಸ್ಯುಐ ಆಗ್ರಹ
ಮಂಗಳೂರು, ಮೇ 27: ಲಸಿಕೆ ಇಲ್ಲದೆ ಪರೀಕ್ಷೆ ಬೇಡ, ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಬೇಕು. ಕೊರೋನ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಎನ್ಎಸ್ಯುಐ ದ.ಕ. ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಆಗ್ರಹಿಸಿದ್ದಾರೆ.
ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನ ಮೂರನೇ ಅಲೆಯ ಮುನ್ಸೂಚನೆ ಇದ್ದು, ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಭಯವನ್ನುಂಟು ಮಾಡಿದೆ. ಇದರ ಮಧ್ಯೆ ಪರೀಕ್ಷೆ ಮಾಡುವುದಾರೆ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆಯಲ್ಲಿ ಲಸಿಕೆ ನೀಡಬೇಕು. ಇಲ್ಲದಿದ್ದರೆ ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದೊಂದು ವರ್ಷದಿಂದ ಕೊರೋನ ತಾಂಡವವಾಡುತ್ತಿದೆ. ಲಾಕ್ಡೌನ್ನಿಂದ ಕೆಲವು ಕಾಲೇಜುಗಳು ಕೂಡ ಮುಚ್ಚಲ್ಪಟ್ಟಿವೆ. ಸರಕಾರದಿಂದ ಸಿಗಬೇಕಾಗಿದ್ದ ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಲ ವಿದ್ಯಾರ್ಥಿಗಳಿಗೆ ಲಭಿಸಿಲ್ಲ. ಕೇವಲ ಆನ್ಲೈನ್ ಮೂಲಕ ತರಗತಿಗಳು ನಡೆಯುತ್ತಿದೆ. ವಿದ್ಯಾರ್ಥಿಗಳ ಶುಲ್ಕದಲ್ಲಿ ಯಾವುದೇ ರಿಯಾಯಿತಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಲಿಲ್ಲ. ಇದರಿಂದ ಪೂರ್ಣ ಪ್ರಮಾಣದ ಶುಲ್ಕವನ್ನು ಪಾವತಿಸಲು ಪೋಷಕರಿಗೆ ತೊಂದರೆಯಾಗಲಿದೆ. ವಿದ್ಯಾರ್ಥಿ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಬೇಕು. ಕೋವಿಡ್ 19ನಿಂದ ಅದೆಷ್ಟೋ ವಿದ್ಯಾರ್ಥಿಗಳು ಪೋಷಕರು, ಕುಟುಂಬಸ್ಥರನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಅವರ ಮುಂದಿನ ಸಂಪೂರ್ಣ ಶಿಕ್ಷಣವನ್ನು ಸರಕಾರ ವಹಿಸಿಕೊಳ್ಳಬೇಕು. ಅಂತಹ ವಿದ್ಯಾರ್ಥಿಗಳ ಕೆಜಿ-ಪಿಜಿವರೆಗಿನ ಶಿಕ್ಷಣದ ವೆಚ್ಚವನ್ನು ಸರಕಾರ ಭರಿಸಬೇಕು ಎಂದು ಸವಾದ್ ಸುಳ್ಯ ಒತ್ತಾಯಿಸಿದರು.
ವಿಟಿಯು ಉಸ್ತುವಾರಿ ಅನ್ವೀತ್ ಕಟೀಲ್ ಮಾತನಾಡಿ, ಆಫ್ಲೈನ್ ಪರೀಕ್ಷೆ ಮಾಡುವ ಮೊದಲು ಆಫ್ಲೈನ್ ತರಗತಿಗಳನ್ನು 45 ದಿನಗಳ ಕಾಲ ನಡೆಸಬೇಕು. ಆನ್ಲೈನ್ನಲ್ಲಿ ಶಿಕ್ಷಣ ನೀಡಿ ಆಫ್ಲೈನ್ ಪರೀಕ್ಷೆ ನಡೆಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ವ್ಯತ್ಯಾಸ ಆಗುತ್ತಿದೆ. ವಿದ್ಯಾರ್ಥಿಗಳು ಅನುತ್ತಿರ್ಣರಾಗುತ್ತಿದ್ದಾರೆ. ಇಂತಹ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ತುಂಬಾ ನೋವುಂಟು ಮಾಡಿದೆ. ಆದುದರಿಂದ ವಿದ್ಯಾರ್ಥಿಗಳು ಕ್ಯಾರಿ ಓವರ್ ಪದ್ಧತಿಯನ್ನು ಕೇಳುತ್ತಿದ್ದಾರೆ. ಹಿಂದಿನ ಸೆಮಿಸ್ಟರ್ ಪರೀಕ್ಷೆ ಇನ್ನು ಮುಗಿದಿಲ್ಲ. ಆದರೆ ಕಾಲೇಜುಗಳು ಮುಂದಿನ ಸೆಮಿಸ್ಟರ್ ತರಗತಿಗಳನ್ನು ಆನ್ಲೈನ್ ಮೂಲಕ ಪ್ರಾರಂಭ ಮಾಡಿದ್ದಾರೆ. ಒಬ್ಬ ವಿದ್ಯಾರ್ಥಿ ಒಂದೇ ಸೆಮಿಸ್ಟರ್ನಲ್ಲಿ ಎಲ್ಲಾ ಸಬ್ಜೆಕ್ಟ್ ಗಳನ್ನು ಓದುವುದು ಹೇಗೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಎನ್ಎಸ್ಯುಐ ಜಿಲ್ಲಾ ಉಪಾಧ್ಯಕ್ಷರಾದ ಆಸ್ಟನ್ ಸ್ವಿಕ್ವೇರಾ, ಅಂಕುಶ್ ಶೆಟ್ಟಿ, ನಿಕಿಲ್ ಪೂಜಾರಿ, ಮುಖಂಡರಾದ ಪವನ್ ಸಾಲ್ಯಾನ್, ಶಫೀಕ್, ರಿಲ್ವಾನ್ ಉಪಸ್ಥಿತರಿದ್ದರು.