ಕೊಲೆಗೀಡಾದ ಭಾಸ್ಕರ್ ಶೆಟ್ಟಿ ಬಹುಕೋಟಿ ಆಸ್ತಿ ಬಗ್ಗೆ ವೀಲುನಾಮೆ
ಚಾರ್ಜ್ಶೀಟ್ನಲ್ಲಿ ಸಾಕ್ಷ್ಯವಾಗಿ ಪರಿಗಣನೆ: ವಾರಸುದಾರಿಕೆ ಬಗ್ಗೆ ಚರ್ಚೆ
ಉಡುಪಿ : ಬಹುಕೋಟಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ಪತ್ನಿ ರಾಜೇಶ್ವರಿ, ಮಗ ನವನೀತ್ ಮತ್ತಿತರ ಮೂವರ ಮೇಲಿನ ಆರೋಪ ಸಾಬೀತಾಗಿ ಜೀವಿತಾವಧಿ ಜೈಲುಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಇದೀಗ ಭಾಸ್ಕರ್ ಶೆಟ್ಟಿ ಆಸ್ತಿಯ ವಾರಸುದಾರಿಕೆಯ ಕುರಿತು ಚರ್ಚೆಗಳು ನಡೆಯುತ್ತಿವೆ.
ತನ್ನ ಹತ್ಯೆಗೆ ಎರಡು ವಾರಗಳ ಹಿಂದೆ ಅಂದರೆ 2016ರ ಜು.15ರಂದು ಭಾಸ್ಕರ್ ಶೆಟ್ಟಿ, ತನ್ನ ಆಸ್ತಿಗೆ ಸಂಬಂಧಿಸಿದಂತೆ ನ್ಯಾಯವಾದಿ ಮೂಲಕ ವೀಲುನಾಮೆಯನ್ನು ಬರೆಸಿದ್ದರು. ಇದು ಅವರ ಕೊಲೆ ಪ್ರಕರಣದ ಆರೋಪ ಪಟ್ಟಿಯಲ್ಲಿ ಸಲ್ಲಿಸಿರುವ ಒಟ್ಟು 270 ದಾಖಲೆಗಳ ಪೈಕಿ 95ನೇ ದಾಖಲೆಯಾಗಿದ್ದು, ಇದನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ವೇಳೆ ಸಾಕ್ಷವಾಗಿ ಪರಿಗಣಿಸಿತ್ತು.
ಈ ಕೊಲೆ ಪ್ರಕರಣದಲ್ಲಿ ಭಾಸ್ಕರ್ ಶೆಟ್ಟಿಗೆ ವೀಲುನಾಮೆ ಬರೆದುಕೊಟ್ಟ ನ್ಯಾಯವಾದಿ ಸಾಕ್ಷಿಯಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಇವರು ಸಾಕ್ಷ ನುಡಿದಿದ್ದರು. ಈ ಮಧ್ಯೆ ಭಾಸ್ಕರ್ ಶೆಟ್ಟಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜೇಶ್ವರಿ ಶೆಟ್ಟಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿಲುನಾಮೆಯಲ್ಲಿ ಏನಿದೆ?: ‘ನನ್ನ ಪತ್ನಿ ಬೇರೆ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರದಲ್ಲಿ ಪತ್ನಿ ಮತ್ತು ಪುತ್ರ ನನಗೆ ದೈಹಿಕ ಹಲ್ಲೆ ನಡೆಸಿದ್ದಾರೆ. ನಾನು ಆಗಸ್ಟ್ ತಿಂಗಳಲ್ಲಿ ವಿದೇಶಕ್ಕೆ ಹೋಗಲಿದ್ದು, ಈ ಮಧ್ಯೆ ನನ್ನ ಜೀವದ ಬಗ್ಗೆ ನನ್ನ ಪತ್ನಿ ಮತ್ತು ಪುತ್ರನಿಂದ ಖಾತರಿ ಇಲ್ಲದ ಕಾರಣ ಹಾಗೂ ನನ್ನ ಪತ್ನಿ, ಪುತ್ರನೊಂದಿಗೆ ಸೇರಿಕೊಂಡು ನನ್ನ ಆಸ್ತಿಗಳನ್ನು ಲಪಟಾಯಿಸುವ ಸಾಧ್ಯತೆ ಇರುವುದರಿಂದ ನನ್ನ ಆಸ್ತಿಗಳ ಬಗ್ಗೆ ಈ ವೀಲುನಾಮೆ ಬರೆದು ಇಡುತ್ತಿದ್ದೇನೆ’ ಎಂದು ಭಾಸ್ಕರ್ ಶೆಟ್ಟಿ ವೀಲುನಾಮೆಯಲ್ಲಿ ಉಲ್ಲೇಖಿಸಿದ್ದಾರೆ.
‘ನನ್ನ ಜೀವಕ್ಕೆ ಅಪಾಯವಾಗಿ, ನಾನು ಅಕಾಲಿಕ ಮರಣ ಅಥವಾ ದುರ್ಮಣಕ್ಕೀಡಾದಲ್ಲಿ ನನ್ನ ಎಲ್ಲ ಹಕ್ಕಿನ ಚರಾಚರ ಆಸ್ತಿಗಳು, ಅವುಗಳಲ್ಲಿರುವ ವಾಣಿಜ್ಯ ಕಟ್ಟಡಗಳಿಂದ ಬರುವ ಬಾಡಿಗೆ ಹಣ, ನನ್ನ ಬ್ಯಾಂಕ್ ಖಾತೆಯಲ್ಲಿರುವ ಹಣ, ನನ್ನ ಹೆಸರಿನಲ್ಲಿರುವ ವಿಮಾ ಪಾಲಿಸಿಗಳಿಂದ ಬರುವ ಹಣ, ನನ್ನ ತಾಯಿ ಗುಲಾಬಿ ಶೆಡ್ತಿಗೆ ಸೇರತಕ್ಕದ್ದು, ಹೊರತು ಅದರಲ್ಲಿ ಬೇರೆ ಯಾರಿಗೂ ಹಕ್ಕು ಹಾಗೂ ಸಂಬಂಧಗಳು ಇರಬಾರದು. ಒಂದು ವೇಳೆ ನನಗಿಂತ ಮೊದಲು ನನ್ನ ತಾಯಿ ನಿಧನರಾದಲ್ಲಿ ನನ್ನ ಕಾಲ ನಂತರ ನನ್ನ ಆಸ್ತಿಗಳಲ್ಲಿ ತಲಾ ಶೇ.10ರಂತೆ ನನ್ನ ಮೂವರು ಸಹೋದರಿಯರಿಗೆ ಪಾಲು ಸಿಗಬೇಕು ಮತ್ತು ಉಳಿದ ಆಸ್ತಿಗಳನ್ನು ಸರಿಯಾಗಿ ಮೂರು ಭಾಗ ಮಾಡಿ ನನ್ನ ಮೂವರು ಸಹೋದರರು ಹಂಚಿಕೊಳ್ಳಬೇಕೇ ಹೊರತು ನನ್ನ ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತನಿಗೆ ನನ್ನ ಯಾವುದೇ ಆಸ್ತಿಗಳಲ್ಲಿ ಹಕ್ಕು ಇರಕೂಡದು’ ಎಂದು ವೀಲುನಾಮೆಯಲ್ಲಿ ಉಲ್ಲೇಖಿಸಲಾಗಿದೆ.
ಭಾಸ್ಕರ ಶೆಟ್ಟಿ ಹೆಸರಿನ ಸ್ಥಿರಾಸ್ತಿಗಳು: ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಶಿರಿಬೀಡುವಿನಲ್ಲಿರುವ ಸರ್ವೇ ನಂಬ್ರ 114ರಲ್ಲಿರುವ ಒಟ್ಟು 26 ಸೆಂಟ್ಸ್ ಸ್ಥಿರಾಸ್ತಿ ಹಾಗೂ ಅದರಲ್ಲಿ ಇರುವ ಶ್ರೀದುರ್ಗಾ ಇಂಟರ್ನ್ಯಾಶನಲ್ ಹೊಟೇಲ್ ಕಟ್ಟಡ ಮತ್ತು ಅದರಲ್ಲಿ ಇರುವ ಬಾಡಿಗೆ ಅಂಗಡಿ ಕೋಣೆಗಳು.
ಅದೇ ರೀತಿ ನಗರದ ಮಸೀದಿ ರಸ್ತೆಯಲ್ಲಿರುವ ಸರ್ವೇ ನಂಬರ್ 120/14ರಲ್ಲಿನ 26 ಸೆಂಟ್ಸ್ ಜಾಗದಲ್ಲಿರುವ ಶಂಕರ್ ಬಿಲ್ಡಿಂಗ್ ಹೆಸರಿನ ವಾಣಿಜ್ಯ ಕಟ್ಟಡ, ಅದರಲ್ಲಿರುವ ಅಂಗಡಿ ಕೋಣೆಗಳು. ನಗರದ ಬಾಳಿಗ ಟವರ್ ಕಟ್ಟಡದಲ್ಲಿರುವ ಸುಮಾರು 210ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಅಂಗಡಿ ಕೋಣೆ. ಶಿವಳ್ಳಿ ಗ್ರಾಮದ ಇಂದ್ರಾಳಿಯಲ್ಲಿರುವ 4,500 ಚದರಡಿ ವಿಸ್ತೀರ್ಣದ ‘ಈಶ್ವರಿ’ ಹೆಸರಿನ ಅವರ ವಾಸದ ಮನೆ.
ಕಾನೂನು ಏನು ಹೇಳುತ್ತದೆ?
ಹಿಂದೂ ಅನುಕ್ರಮ ಕಾಯ್ದೆ 1956ರಂತೆ ಒಬ್ಬ ವ್ಯಕ್ತಿ ಕೊಲೆಗೀಡಾದಲ್ಲಿ ಆ ವ್ಯಕ್ತಿಯ ಕೊಲೆ ಮಾಡಿದವರು ಅಥವಾ ಕೊಲೆಗೆ ಪ್ರಚೋದನೆ ನೀಡಿದವರು ಮೃತ ವ್ಯಕ್ತಿಯ ಆಸ್ತಿಗೆ ವಾರಸುದಾರರಾಗಿದ್ದರೆ ಆ ಆಸ್ತಿಯ ಹಕ್ಕಿನಿಂದ ಅವರು ಅನರ್ಹರಾಗಿರುತ್ತಾರೆ ಎಂದು ಕಾನೂನು ತಜ್ಞರು ಹೇಳುತ್ತಾರೆ.
ಜೀವಾವಧಿ ಶಿಕ್ಷೆ: 14 ವರ್ಷವೇ, ಜೀವಿತಾವಧಿಯೇ?
ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವುದರಿಂದ ಶಿಕ್ಷೆಯ ಅವಧಿ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳು ಮೂಡಿವೆ. ಜೀವಾವಧಿ ಅಂದರೆ ಕೇವಲ 14 ವರ್ಷ ಜೈಲು ವಾಸವೇ ಅಥವಾ ಜೀವನ ಪರ್ಯಂತ (ಜೀವಿತಾವಧಿ) ಜೈಲುಶಿಕ್ಷೆಯೇ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಎಂ.ಶಾಂತಾರಾಮ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯವು ಜೀವಿತಾವಧಿ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಾಜಿ ಪ್ರಧಾನಿ ರಾಜೀವ ಗಾಂಧಿ ಹತ್ಯೆ ಪ್ರಕರಣದ ಹಂತಕರ ಅರ್ಜಿಯನ್ನು ಪರಿಗಣಿಸುವಾಗ ಸುಪ್ರೀಂ ಕೋರ್ಟಿನ ಐವರು ನ್ಯಾಯಾಮೂರ್ತಿಗಳನ್ನು ಒಳಗೊಂಡ ಸಂವಿಧಾನಿಕ ಪೀಠವು 2015ರಲ್ಲಿ ಜೀವಾವಧಿ ಶಿಕ್ಷೆಯ ಕುರಿತು ಅಂತಿಮ ತೀರ್ಪು ನೀಡಿದ್ದು, ಅದರಂತೆ ಜೀವಾವಧಿ ಶಿಕ್ಷೆ ಅಂದರೆ ಅಪರಾಧಿಗಳು ಜೀವನ ಪರ್ಯಂತ ಜೈಲಿನಲ್ಲಿ ಇರಬೇಕು ಎಂಬುದಾಗಿದೆ ಎಂದರು.
14 ವರ್ಷ ಜೈಲುಶಿಕ್ಷೆ ಅನುಭವಿಸಿದ ನಂತರ ಅಪರಾಧಿಯನ್ನು ಸನ್ನಡತೆ ಹಾಗೂ ಇತರ ಆಧಾರದಲ್ಲಿ ಬಿಡುಗಡೆಗೊಳಿಸುವ ಅಧಿಕಾರ ರಾಜ್ಯ ಸರಕಾರಗಳಿಗೆ ಇವೆ. ಆದರೆ 14 ವರ್ಷ ಜೈಲುಶಿಕ್ಷೆ ಅನುಭವಿಸಿದ ಬಳಿಕ ಜೈಲಿನಿಂದ ಹೊರಬರುವುದು ನನ್ನ ಹಕ್ಕು ಎಂದು ಅಪರಾಧಿಗಳು ಭಾವಿಸಬಾರದು. ಅದೇರೀತಿ ಅಪರಾಧಿಗಳು ತನ್ನನ್ನು ಬಿಡುಗಡೆಗೊಳಿಸುವಂತೆ ನೇರವಾಗಿ ನ್ಯಾಯಾಲಯ ಅಥವಾ ಸರಕಾರದ ಮುಂದೆ ಅರ್ಜಿ ಕೂಡ ಸಲ್ಲಿಸುವಂತಿಲ್ಲ. ಇದು ಪೂರ್ಣ ಸರಕಾರದ ವಿವೇಚನೆಗೆ ಬಿಟ್ಟ ವಿಚಾರ. ಇದರಲ್ಲಿ ಅಪರಾಧಿಗಳು ಹಸ್ತಕ್ಷೇಪ ಮಾಡುವಂತಿಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ’ ಎಂದು ಎಂ.ಶಾಂತಾರಾಮ್ ಶೆಟ್ಟಿ ತಿಳಿಸಿದರು.