ತುಳುನಾಡಿನ ಬಾವುಟಕ್ಕೆ ಅವಮಾನ ಪ್ರಕರಣ : ಆರೋಪಿ ಸೆರೆ
ಸೂರ್ಯ ಎನ್.ಕೆ.
ಮಂಗಳೂರು, ಜೂ.18: ಟ್ರೋಲ್ ಪೇಜ್ವೊಂದರಲ್ಲಿ ತುಳುನಾಡಿನ ಬಾವುಟವನ್ನು ಚಪ್ಪಲಿಗೆ ಎಡಿಟ್ ಮಾಡಿ ಅವಮಾನಗೊಳಿಸಿದ್ದ ಮತ್ತು ಅಶ್ಲೀಲ ಬರಹ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಶ್ರೀರಾಂಪುರ ಒಂದನೇ ಕ್ರಾಸ್ ನಿವಾಸಿ ಸೂರ್ಯ ಎನ್.ಕೆ. ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
2021ರ ಜೂ.6ರಂದು ಆರೋಪಿಯು ಎಡಿಟ್ ಮಾಡಿ ಅಶ್ಲೀಲ ಬರಹಗಳನ್ನು ಹಾಕಿ ತುಳುವರ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾನೆ ಎಂದು ಮಾಜಿ ಮೇಯರ್, ಕಾರ್ಪೊರೇಟರ್ ಶಶಿಧರ್ ಹೆಗ್ಡೆ ನೇತೃತ್ವದ ನಿಯೋಗ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ರನ್ನು ಭೇಟಿ ನೀಡಿ ದೂರು ನೀಡಿತ್ತು. ತುಳು ಬಾವುಟ ಅವಮಾನಿಸಿದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯ ಬಂಧನ ಕಾರ್ಯಾಚರಣೆಯಲ್ಲಿ ಬರ್ಕೆ ಎಸ್ಸೈ ಹಾರೂನ್ ಅಖ್ತರ್, ಉರ್ವ ಠಾಣೆಯ ಪೊಲೀಸರಾದ ಪುಷ್ಪರಾಜ್, ಪ್ರಕಾಶ್, ಬರ್ಕೆ ಠಾಣೆಯ ಪೊಲೀಸ್ ಶರತ್ ಪಾಲ್ಗೊಂಡಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.