ಕುಳಾಯಿಯಲ್ಲಿ ಮಲ್ಟಿಪರ್ಪಸ್ ಸೈಕ್ಲೋನ್ ಶೆಲ್ಟರ್ : ಸಚಿವ ಕೋಟ
ಮಂಗಳೂರು, ಜೂ.19: ಚಂಡಮಾರುತದಿಂದ ತೊಂದರೆಗೆ ಒಳಗಾದವರಿಗೆ ಆಶ್ರಯ ನೀಡಲು ಕುಳಾಯಿಯಲ್ಲಿ ಮಲ್ಟಿಪರ್ಪಸ್ ಸೈಕ್ಲೋನ್ ಶೆಲ್ಟರ್ ತೆರೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮಳೆಗಾಲದ ಸಿದ್ದತೆಯ ಕುರಿತು ಶನಿವಾರ ಮುಖ್ಯಮಂತ್ರಿಯ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ಈ ಶೆಲ್ಟರ್ಗೆ ಮಂಜೂರಾತಿ ನೀಡಬೇಕು ಎಂದು ಮುಖ್ಯಮಂತ್ರಿಯ ಬಳಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ವಿಪತ್ತು ಕಾರ್ಯಗಳನ್ನು ಕೈಗೊಳ್ಳಲು ತಂಡಗಳು ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನೆರೆಯಿಂದ ಜಿಲ್ಲೆಯ ಸಸಿಹಿತ್ಲು, ಉಳ್ಳಾಲದ ಸೋಮೇಶ್ವರ ಸಹಿತ ಮತ್ತಿತರ ಪ್ರದೇಶ ಗಳಲ್ಲಿ ಕಡಲ್ಕೊರತೆ ಉಂಟಾಗಿದೆ. ಕಡಲ್ಕೊರತೆ ನಿವಾರಣೆಗೆ ತಡೆಗೋಡೆಗಳನ್ನು ನಿರ್ಮಾಣ ಮಾಡುವ ಕಾರ್ಯಗಳು ಕೈಗೊಳ್ಳಬೇಕಿದೆ ಎಂದು ಸಚಿವ ಕೋಟ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಮಾತನಾಡಿ ಜನವರಿಯಿಂದ ಈವರೆಗೆ 707 ಮಿ.ಮೀ.ನಷ್ಟು ಮಳೆ ಸುರಿದಿದೆ. ಇದು ವಾಡಿಕೆಗಿಂತ ಶೇ.58ರಷ್ಟು ಹೆಚ್ಚು ಮಳೆಯಾಗಿದೆ. ಬೇಸಿಗೆಯಲ್ಲೂ ಉತ್ತಮ ಮಳೆಯಾಗಿದೆ. ಕುಡಿಯುವ ನೀರಿನ ಸಮಸ್ಯೆಯಾಗಿಲ್ಲ. ನೇತ್ರಾವತಿ ನದಿಪಾತ್ರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವಂತಹ 48 ಗ್ರಾಪಂಗಳನ್ನು ಈಗಾಗಲೇ ಗುರುತಿಸಲಾಗಿದೆ. ನೆರೆಯಿಂದ ದುರಂತ ಸಂಭವಿಸುವುದನ್ನು ತಡೆಯಲು ತಂಡ ಗಳನ್ನು ರಚಿಸಲಾಗಿದೆ ಎಂದರು.
380 ಹೋಂಗಾರ್ಡ್ಗಳನ್ನು ಬೀಚ್ ಹಾಗೂ ಇತರ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣೆ ಕಾರ್ಯಗಳಿಗೆ ಬಳಸಿ ಕೊಳ್ಳಲು ಯೋಜನೆ ರೂಪಿಸಲಾಗಿದೆ. ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನರ ಮನೆಗಳಿಗೆ ನೀರು ನುಗ್ಗುವ ಸಂಭವಿಸಿದ್ದಲ್ಲಿ ಅವರನ್ನು ಸ್ಥಳಾಂತರಿಸಲು ಕಾಳಜಿ ಕೇಂದ್ರಗಳನ್ನು ತೆರೆಯಲು ಗುರುತಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು 25 ಕೋ.ರೂ. ವಿಪತ್ತು ನಿಧಿ ಇದೆ. ಮಳೆಯಿಂದ ಹಾನಿಗೊಳಗಾದ 26 ಮನೆಗಳಿಗೆ ಎನ್ಡಿಆರ್ಅಫ್ ಮಾರ್ಗಸೂಚಿಯನ್ವಯ ಪರಿಹಾರ ನೀಡಲಾಗಿದೆ ಎಂದರು.
ಸಭೆಯಲ್ಲಿ ಶಾಸಕ ಭರತ್ ವೈ. ಶೆಟ್ಟಿ, ದ.ಕ.ಜಿಪಂ ಸಿಇಒ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಮಂಗಳೂರು ಉಪ ವಿಭಾಗಾಧಿಕಾರಿ ಮದನ್ ಮೋಹನ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.