ಬೆಲೆ ಏರಿಕೆ ವಿರುದ್ಧ ಸಿಪಿಐಎಂನಿಂದ ಮುಂದುವರಿದ ಚಳವಳಿ
ಮಂಗಳೂರು, ಜು.11: ಪೆಟ್ರೋಲಿಯಂ ಉತ್ಪನ್ನ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ವಿಪರೀತ ಹೆಚ್ಚಿದೆ. ಜೊತೆಗೆ ವಿದ್ಯುತ್ ದರದಲ್ಲೂ ಏರಿಕೆ ಕಂಡಿದೆ. ಇದು ಜನಸಾಮಾನ್ಯರ ಬದುಕಿಗೆ ಕೊಡಲಿ ಪೆಟ್ಟು ನೀಡಿದೆ ಎಂದು ಆರೋಪಿಸಿ ಸಿಪಿಐಎಂನಿಂದ ಪ್ರತಿಭಟನಾ ಚಳವಳಿ ಮುಂದುವರಿದಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಧಿಕ್ಕರಿಸಿ ಸಿಪಿಐಎಂ ನೇತೃತ್ವದಲ್ಲಿ ಮಂಗಳೂರು ನಗರದಾದ್ಯಂತ ನಡೆಯುತ್ತಿರುವ ವಾರಾಚರಣೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎನ್ನಲಾಗಿದ್ದು, ರವಿವಾರ ಕುಲಶೇಖರ ಹಾಗೂ ಜಪ್ಪಿನಮೊಗರಿನಲ್ಲಿ ಪ್ರತಿಭಟನಾ ಚಳವಳಿಗಳು ನಡೆದವು.
ಈ ಸಂದರ್ಭ ಮಾತನಾಡಿದ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಜನರ ಬದುಕಿನ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಬಿಜೆಪಿ ಸರಕಾರಗಳು ದೇಶ ಹಾಗೂ ರಾಜ್ಯವನ್ನು ಆಳುತ್ತಿರುವುದು ವಿಪರ್ಯಾಸ. ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುವ ಮೂಲಕ ದೇಶದ ಆರ್ಥಿಕತೆಯನ್ನೇ ಬುಡಮೇಲುಗೊಳಿಸಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಜಯಂತಿ ಶೆಟ್ಟಿ, ದಿನೇಶ್ ಶೆಟ್ಟಿ, ಶಶಿಕಲಾ, ವಸಂತಿ, ಮೀನಾ, ಜಯಲಕ್ಷ್ಮೀ, ಮನೋಜ್ ಶೆಟ್ಟಿ, ಅಭಿಷೇಕ್, ಹನೀಫ್, ದೇವಪ್ಪ, ಸುಂದರ ಮತ್ತಿತರರಿದ್ದರು.