ಸುರತ್ಕಲ್ ನಲ್ಲಿ ರಿಕ್ಷಾ ಚಾಲಕನ ಮೇಲೆ ಬಸ್ ಚಾಲಕ, ನಿರ್ವಾಹಕನಿಂದ ಹಲ್ಲೆ: ದೂರು ದಾಖಲು
ಮಂಗಳೂರು, ಜು.11: ಸುರತ್ಕಲ್ ಸಮೀಪದ ಹೊಟೇಲ್ ಬಳಿ ರಿಕ್ಷಾ ಚಾಲಕನನ್ನು ಅಡ್ಡಗಟ್ಟಿ ಖಾಸಗಿ ಬಸ್ ಚಾಲಕ, ನಿರ್ವಾಹಕ ಹಲ್ಲೆಗೈದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚೇಳಾರ್ ನಿವಾಸಿ ರಿಕ್ಷಾ ಚಾಲಕ ಸುಧಾಕರ ಚೇಳಾರು ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಿಕ್ಷಾದಲ್ಲಿ ಪ್ರಯಾಣಿಕರನ್ನು ಕೊಂಡೊಯ್ದರೆಂದು ಆರೋಪಿಸಿ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಿಕ್ಷಾ ಚಾಲಕ ಸುಧಾಕರ ಈ ಹಿಂದೆ ಸಿಟಿ ಬಸ್ನಲ್ಲಿ ಚಾಲಕರಾಗಿ ಆಗಿ ಕೆಲಸ ಮಾಡುತ್ತಿದ್ದು, ಈಗ ಸುರತ್ಕಲ್ನಲ್ಲಿ ರಿಕ್ಷಾದಲ್ಲಿ ದುಡಿಯುತ್ತಿದ್ದಾರೆ. ಬೆಳಗ್ಗೆ 8:30ರ ಸುಮಾರಿಗೆ ಅವರು ಚೇಳಾರ್ನಿಂದ ತನ್ನ ರಿಕ್ಷಾದಲ್ಲಿ ಸುರತ್ಕಲ್ ಗೆ ಬರುತ್ತಿದ್ದರು. ತಡಂಬೈಲ್ ಸಮೀಪ ಪ್ರಯಾಣಿಕರನ್ನು ಪಿಕಪ್ ಮಾಡಿ ಸುರತ್ಕಲ್ ಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆ ಪ್ರಕರಣವನ್ನು ಸುರತ್ಕಲ್ ರಿಕ್ಷಾ ಚಾಲಕ-ಮಾಲಕರ ಸಂಘಟನೆ ಸಹಿತ ವಿವಿಧ ರಿಕ್ಷಾ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿವೆ.