ತುಳು ಲಿಪಿ ಯೂನಿಕೋಡ್ ನಕಾಶೆ ಸೇರ್ಪಡೆಗೆ ಕ್ರಮ ಅಂತಾರಾಷ್ಟ್ರೀಯ ಮಾನ್ಯತೆಗೆ ದಿಟ್ಟ ಹೆಜ್ಜೆ: ದಯಾನಂದ ಕತ್ತಲ್ಸಾರ್
ರಾಜ್ಯ ಸರಕಾರದಿಂದ ಅಧಿಕೃತ ಘೋಷಣೆಗೆ ಬೇಡಿಕೆ
ಮಂಗಳೂರು, ಜು.21: ತುಳು ಲಿಪಿಯನ್ನು ಸೂಕ್ತವಾಗಿ ಯುನಿಕೋಡ್ ನಕಾಶೆ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲು ಅಕಾಡೆಮಿಗೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸೂಚಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಳು ಭಾಷೆಗೆ ಮಾನ್ಯತೆ ಪಡೆಯುವಲ್ಲಿ ದಿಟ್ಟ ಹೆಜ್ಜೆ ಯಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಸಂತಸ ವ್ಯಕ್ತ ಪಡಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಈ ಪ್ರಕ್ರಿಯೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ತುಳು ಲಿಪಿಯನ್ನು ಯುನಿಕೋಡ್ ನಕಾಶೆಯಲ್ಲಿ ಸೇರ್ಪಡೆಗೊಂಡಿರುವುದರಿಂದ ತುಳುಭಾಷೆ ಲಿಪಿ ಮೊಬೈಲ್ ಸೇರಿದಂತೆ ವಿದ್ಯುನ್ಮಾನ ಮಾಧ್ಯಮ ದಲ್ಲಿ ಬಳಕೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ತುಳು ಲಿಪಿಯನ್ನು ಯುನಿಕೋಡ್ ಗೆ ಸೇರ್ಪಡೆ ಕಾರ್ಯಕ್ಕೆ ಹಿಂದಿನ ಅಧ್ಯಕ್ಷರಾದ ಜಾನಕಿ ಬ್ರಹ್ಮಾವರರಿದ್ದ ಸಂದರ್ಭದಲ್ಲಿ ತಂತ್ರಜ್ಞಾನ ತಜ್ಞರಾದ ಪವನಜ ಮೂಲಕ ಆರಂಭವಾಗಿತ್ತು. ಮಾಜಿ ಅಧ್ಯಕ್ಷ ರಾದ ಎ.ಸಿ. ಭಂಡಾರಿಯವರಿಂದಲೂ ಪ್ರಯತ್ನ ನಡೆದು ನಮ್ಮ ಅವಧಿಯಲ್ಲಿ ವೇಗ ನೀಡಲಾಯಿತು. ಹಲವು ಸಂಘ ಸಂಸ್ಥೆಗಳು, ಹಲವು ವಿವಿಗಳ ಪಠ್ಯಗಳ ಮೂಲಕ, 2000 ವರ್ಷ ಗಳ ಇತಿಹಾಸವಿರುವ ತುಳುವಿನ ಮೌಲ್ಯ , ಅಗಾಧತೆಯನ್ನು ಸರಕಾರದ ಗಮನಕ್ಕೆ ತರುವ ಕೆಲಸವನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ತುಳು ಕಲಿಸುವವರ ನಡುವಿನ ಗೊಂದಲವನ್ನು ಅಕಾಡೆಮಿ ವತಿಯಿಂದ ಬಗೆಹರಿಸಲಾಗಿದೆ. ಶಾಲೆಗಳಲ್ಲಿ ಪ್ರಸಕ್ತ ತ್ರತೀಯ ಐಚ್ಛಿಕ ಭಾಷೆಯಾಗಿ ತುಳುವನ್ನು ಕಲಿಸಲಾಗುತ್ತಿದೆ. ಜಿಲ್ಲೆಯಲ್ಲಿ 250 ಶಾಲೆಗಳಿದ್ದು ಈಗ ಕೇವಲ 53 ಶಾಲೆಗಳಲ್ಲಿ ಮಾತ್ರವೇ ಅನುಷ್ಠಾನ ವಾಗಿದೆ.
ಎಲ್ಲಾ ಶಾಲೆಗಳಲ್ಲಿ 1 ನೆ ತರಗತಿಯಿಂದಲೇ ತುಳು ಆರಂಭವಾಗಬೇಕಿದೆ. ಮಾತ್ರವಲ್ಲದೆ ತುಳುವರು ತಮ್ಮ ಮಾತ್ರ ಭಾಷೆಯಾಗಿ ತುಳುವನ್ನೇ ಅಧಿಕೃತ ವಾಗಿ ಶಾಲಾ ಹಂತದಲ್ಲೇ ನೋಂದಣಿ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಸದಸ್ಯರಾದ ಡಾ. ಆಕಾಶ್ ರಾಜ್ ಜೈನ್ ಮಾತನಾಡಿ, ತುಳು ಭಾಷೆ ಸಂವಿಧಾನದ 8ನೆ ಪರಿಚ್ಛೇದ ಕ್ಕೆ ಸೇರ್ಪಡೆ ಗೊಳ್ಳಬೇಕೆಂಬ ಮನವಿಗೆ ಪೂರಕವಾಗಿ ರಾಜ್ಯ ಸರಕಾರ ತುಳುವನ್ನು ಅಧಿಕೃತ ಭಾಷೆಯಾಗಿ ಘೋಷಿಸಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಸದಸ್ಯರಾದ ಶಶಿಧರ ಶೆಟ್ಟಿ, ನಾಗೇಶ್ ಕುಲಾಲ್, ರಿಜಿಸ್ಟ್ರಾರ್ ಕವಿತಾ ಪ್ರಶಾಂತ್ ಉಪಸ್ಥಿತರಿದ್ದರು.