ಕರ್ನಾಟಕ ಮಾಧ್ಯಮ ಅಕಾಡಮಿ ಸದಸ್ಯರಾಗಿ ಜಗನ್ನಾಥ ಶೆಟ್ಟಿ ಬಾಳ
ಮಂಗಳೂರು, ಜು.26: ರಾಜ್ಯ ಸರಕಾರದ ಮಾಧ್ಯಮ ಅಕಾಡಮಿಯ ಸದಸ್ಯರಾಗಿ ಮಂಗಳೂರಿನ ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮದಲ್ಲಿ ಕಳೆದ 33 ವರ್ಷಗಳಿಂದ ದುಡಿಯುತ್ತಿರುವ ಬಾಳ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿದ್ದಾರೆ. 2017ರಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ, 2008ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2018ರಲ್ಲಿ ಅಬುದಾಭಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಪ್ರಶಸ್ತಿ ಪಡೆದಿದ್ದು, 2011ರ ಸಾಲಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಕರ್ನಾಟಕ ಮಾಧ್ಯಮ ಅಕಾಡಮಿಯ ಅಧ್ಯಕ್ಷರಾಗಿ ಕೆ.ಸದಾಶಿವ ಶೆಣೈ ಆಯ್ಕೆಯಾಗಿದ್ದಾರೆ. ಇತರ ಸದಸ್ಯರಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಗೋಪಾಲ ಸಿಂಗಪ್ಪಯ್ಯ ಯಡಗೆರೆ, ಕೆ.ಕೆ.ಮೂರ್ತಿ, ಶಿವಕುಮಾರ್ ಬೆಳ್ಳಿತಟ್ಟೆ , ಕೂಡ್ಲಿ ಗುರುರಾಜ್, ಸಿ.ಕೆ. ಮಹೇಂದ್ರ, ದೇವೇಂದ್ರಪ್ಪ ಕಪನೂರು, ಕೆ.ವಿ. ಶಿವಕುಮಾರ್ ಆಯ್ಕೆಯಾಗಿದ್ದಾರೆ.