ಮಂಗಳೂರು: ಆಸ್ಕರ್ ಫೆರ್ನಾಂಡಿಸ್ಗೆ ಮೆದುಳಿನ ಶಸ್ತ್ರಚಿಕಿತ್ಸೆ
ಮಂಗಳೂರು: ನಗರದ ಯೆನೆಪೊಯ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ನ ಹಿರಿಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಮಂಗಳವಾರ ನಸುಕಿನ ಜಾವ ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಯಿತು.
ಆಸ್ಕರ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ತಡರಾತ್ರಿ 12ರಿಂದ ಆರಂಭವಾದ ಶಸ್ತ್ರ ಚಿಕಿತ್ಸೆಯು ನಸುಕಿನ ಜಾವ 5.30ರವರೆಗೂ ನಡೆಯಿತು. ಯೆನೆಪೊಯ ಆಸ್ಪತ್ರೆಯ ಡಾ. ದಿವಾಕರ್ ರಾವ್, ಎ.ಜೆ. ಆಸ್ಪತ್ರೆಯ ಡಾ.ಸುನೀಲ್ ಶೆಟ್ಟಿ ನೇತೃತ್ವದ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನೆರವೇರಿಸಿತು.
ಆಸ್ಕರ್ ಅವರು ಜು.19ರಂದು ಬೆಳಗ್ಗೆ ಮನೆಯಲ್ಲಿ ಯೋಗ ಮಾಡುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಬಿದ್ದಿದ್ದರು. ಸಣ್ಣ ಗಾಯವಾಗಿದ್ದರಿಂದ ಆಸ್ಕರ್ ಅದನ್ನು ನಿರ್ಲಕ್ಷಿಸಿದ್ದರು. ಅದೇ ದಿನ ಡಯಾಲಿಸಿಸ್ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ್ದಾರೆ. ಈ ಸಂದರ್ಭ ತಲೆಗೆ ಪೆಟ್ಟಾಗಿರುವುದನ್ನು ವೈದ್ಯರು ಪತ್ತೆ ಹಚ್ಚಿ, ಐಸಿಯುಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಿದ್ದರು.