ಕ್ಷುಲ್ಲಕ ಕಾರಣ; ಯುವತಿ ಆತ್ಮಹತ್ಯೆ
ಬೈಂದೂರು, ಜು.29: ಮಕ್ಕಳು ಮೊಬೈಲ್ ನೋಡುವ ವಿಷಯದ ಕುರಿತಂತೆ ಗಂಡನೊಂದಿಗೆ ನಡೆದ ಜಗಳದಲ್ಲಿ ನೊಂದ ಯುವತಿಯೊಬ್ಬಳು ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಅಪರಾಹ್ನ ನಡೆದಿದೆ.
ಮೃತಳನ್ನು ಕಾಲ್ತೋಡು ಗ್ರಾಮದ ನೀರ್ಕುಳಿ ಮನೆಯ ಸುರೇಂದ್ರ ಶೆಟ್ಟಿ ಎಂಬವರ ಮಗಳಾದ ಸುಶ್ಮೀತಾ (35) ಎಂದು ಗುರುತಿಸಲಾಗಿದೆ. ಮುಂಬಯಿಯಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ಗಂಡ ವಿಜಯ ಶೆಟ್ಟಿ ಲಾಕ್ಡೌನ್ ಸಮಯದಲ್ಲಿ ಊರಿಗೆ ಬಂದಿದ್ದು, ಅವರು ಮಕ್ಕಳಿಗೆ ಮೊಬೈಲ್ ನೀಡುವ ವಿಷಯದಲ್ಲಿ ಜಗಳವಾಡುತಿದ್ದರು ಎಂದು ತಿಳಿದುಬಂದಿದೆ.
ಬುಧವಾರವೂ ಇದೇ ವಿಷಯಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು, ವಿಜಯ ತಾನು ಮುಂಬಯಿಗೆ ಹೋಗುವಾಗಿ ಹೇಳಿ ಸಿದ್ಧತೆ ನಡೆಸಿದಾಗ ಸುಶ್ಮೀತಾ ತಕ್ಷಣ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಕೆಲಹೊತ್ತಿನ ಬಳಿಕ ಕಿಟಕಿಯಿಂದ ನೋಡಿದಾಗ ಆಕೆ ಕುತ್ತಿಗೆಗೆ ನೇಣು ಹಾಕಿಕೊಂಡಿರುವುದು ಕಂಡುಬಂತು. ತಕ್ಷಣ ಬಾಗಿಲು ಮುರಿದು ಆಕೆಯನ್ನು ಕುಣಿಕೆಯಿಂದ ಇಳಿಸಿ ಆಸ್ಪತ್ರೆಗೆ ಒಯ್ದರೂ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.