ಉಳ್ಳಾಲದ ಬಿ.ಎಂ.ಬಾಷಾ ಮನೆಗೆ ವಿಎಚ್ಪಿ, ಬಜರಂಗದಳ ಮುತ್ತಿಗೆಗೆ ಯತ್ನ
ಶರಣ್ ಪಂಪ್ವೆಲ್ ಸಹಿತ ಹಲವರನ್ನು ವಶಕ್ಕೆ ಪಡೆದ ಪೊಲೀಸರು
ಮಂಗಳೂರು: ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಉದ್ಯಮಿ ಬಿ.ಎಂ ಬಾಷಾ ಮನೆಗೆ ವಿಶ್ವಹಿಂದೂ ಪರಿಷತ್, ಬಜರಂಗದಳ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಮುತ್ತಿಗೆ ಯತ್ನಿಸಿದ ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ಸಹಿತ ಹಲವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಎಚ್ಪಿ ಹಾಗೂ ಬಜರಂಗದಳ ಕಾರ್ಯಕರ್ತರು "ಜನಜಾಗೃತಿ" ಹೆಸರಲ್ಲಿ ರಸ್ತೆಗಳಲ್ಲಿ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದರು. ನಂತರ ಬಿ.ಎಂ. ಬಾಷಾ ಅವರ ಮನೆಯ ಗೇಟ್ ಬಳಿ ತೆರಳಿ ಮನೆಗೆ ನುಗ್ಗಲು ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಈ ವೇಳೆ ಪೊಲೀಸರು ವಿಶ್ವಹಿಂದೂ ಪರಿಷತ್ ವಿಭಾಗ ಸಂಚಾಲಕ ಶರಣ್ ಸಹಿತ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಮನೆಯ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ನಗರದಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ವಿಹಿಂಪ, "ಜಿಲ್ಲೆಯಲ್ಲಿ ಲವ್ ಜಿಹಾದ್ ನಡೆಯುತ್ತಿದೆ. ಪ್ರೀತಿ-ಪ್ರೇಮದ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಅಂಥದ್ದೇ ಘಟನೆ ಉಳ್ಳಾಲಕ್ಕೆ ದಾಳಿ ಮಾಡಿದಾಗ ಬಹಿರಂಗವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಆಗ್ರಹಿಸಿದ್ದ ವಿಎಚ್ಪಿ ಮುಖಂಡರು, ಆಗಸ್ಟ್ 11ರಂದು ಉಳ್ಳಾಲದಾದ್ಯಂತ ಪೋಸ್ಟ್ ಕಾರ್ಡ್ ಚಳವಳಿ ನಡೆಸಲಿರುವುದಾಗಿ ವಿಎಚ್ಪಿ ಪ್ರಕಟಿಸಿತ್ತು.