ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ, ಕೃಷಿ ಪದವಿ ಪ್ರವೇಶಕ್ಕೆ ಶೇ.50ರಷ್ಟು ಮೀಸಲು: ಸಚಿವ ಬಿ.ಸಿ.ಪಾಟೀಲ್
ಹಾವೇರಿ, ಆ. 15: `ನೂತನವಾಗಿ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ಯೋಜನೆ ಜಾರಿಗೊಳಿಸಲಾಗಿದೆ. ಕೃಷಿ ಪದವಿಗೆ ಶೇ.50ರಷ್ಟು ಸೀಟು ಕಾಯ್ದಿರಿಸಿ ಆದೇಶಮಾಡಲಾಗಿದೆ' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ರವಿವಾರ ಇಲ್ಲಿನ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ 75ನೆ ಸ್ವಾತಂತ್ರ್ಯೋತ್ಸವ ರಾಷ್ಟ್ರ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದ ಅವರು, `ಜಿಲ್ಲೆಯ ಹನುಮನಮಟ್ಟಿ ಕೃಷಿ ಪ್ರಾದೇಶಿಕ ಕೇಂದ್ರದ ಅಭಿವೃದ್ಧಿಗೆ 5 ಕೋಟಿ ರೂ.ಹಣವನ್ನು ಒದಗಿಸಲಾಗಿದೆ. ಕೃಷಿಯ ಸಮಗ್ರ ಬೆಳೆವಣಿಗೆಗೆ ಎಲ್ಲ ಆದ್ಯತೆ ನೀಡಲಾಗುವುದು. ನನ್ನ ಬೆಳೆ ನನ್ನ ಹಕ್ಕು ಯೋಜನೆಯಡಿ ರೈತರೇ ತಮ್ಮ ಬೆಳೆಯನ್ನು ನೊಂದಾಯಿಸಿಕೊಳ್ಳು ಅವಕಾಶ ಕಲ್ಪಿಸಲಾಗಿದೆ' ಎಂದರು.
`ಕಳೆದ ವರ್ಷ ಬೆಳೆ ಸಮೀಕ್ಷೆ ಉತ್ಸವ ಕಾರ್ಯಕ್ರಮದಲ್ಲಿ 80 ಲಕ್ಷ ಪ್ಲಾಂಟ್ಗಳನ್ನು ಸ್ವತಃ ರೈತರೇ ಸಮೀಕ್ಷೆ ನಡೆಸಿದ್ದಾರೆ. ಈ ವರ್ಷ ಸ್ವತಃ ರೈತರೇ ಸಮೀಕ್ಷೆ ಮಾಡುವ ಮೂಲಕ ನನ್ನ ಬೆಳೆ ನನ್ನ ಹಕ್ಕು ಚಲಾಯಿಸಬೇಕು. ಕೊರೋನ ಸಂದರ್ಭದಲ್ಲೂ ಕರ್ನಾಟಕದಲ್ಲಿ 154 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥವನ್ನು ಉತ್ಪಾದಿಸುವ ಮೂಲಕ ಶೇ.10ರಷ್ಟು ಉತ್ಪಾದನೆ ಹೆಚ್ಚು ಮಾಡಿದ್ದೇವೆ, ದೇಶದಲ್ಲೆ ರಾಜ್ಯ ಆಹಾರ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ದೇಶದಲ್ಲಿ ಆಹಾರ ಉತ್ಪಾದನೆ ಶೇ.3ರಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದರು.
ಆತ್ಮನಿರ್ಭರ ಯೋಜನೆಯಡಿ ಕೃಷಿ ಮೂಲಭೂತ ಸೌಕರ್ಯಕ್ಕಾಗಿ 1ಲಕ್ಷ ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಅದರಲ್ಲಿ 10 ಸಾವಿರ ಕೋಟಿ ರೂ.ಆಹಾರ ವಸ್ತುಗಳ ಉತ್ಪಾದನೆ, ಸಂಸ್ಕರಣೆಗೆ ಅನುದಾನ ಒದಗಿಸಲಾಗಿದೆ. ಇದು ಆಹಾರದ ದೃಢತೆ ಅಥವಾ ಸಮತೋಲನ ಕಾಪಾಡಲು ಸಾಧ್ಯವಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ 10 ಸಾವಿರ ರೂ.ನಂತೆ 53 ಲಕ್ಷ ರೈತರಿಗೆ ಸಹಾಯಧನ ನೀಡಿದ್ದೇವೆ ಎಂದರು.
ಸ್ವಾತಂತ್ರ್ಯ ಹೋರಾಟದ ಚಳುವಳಿ ದಿಟ್ಟ ಸ್ವಾತಂತ್ರ್ಯ ಯೋಧ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಣೆ ಮಾಡಲು ಘೋಷಣೆ ಮಾಡಿರುವುದು ಸಂತಸ ತಂದಿದೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ನಾವು ಎದುರಿಸಿದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂದು ನಮಗೆ ಸಾಧ್ಯವಾಗಿದೆ. ಬಡತನ, ಅನಕ್ಷರತೆ, ನಿರುದ್ಯೋಗ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಆಹಾರ ಉತ್ಪಾದನೆಯಲ್ಲಿ ನಾವು ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿ ಕೈಗೊಳ್ಳಲಿದ್ದೇವೆ ಎಂದರು.
ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ, ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವ ಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ. ಸಿಇಓ ಮಹಮ್ಮದ್ ರೋಷನ್, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ ಗಿರೀಶ ಸ್ವಾದಿ ಇತರೆ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.