ಕಾರ್ಕಳದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ: ಸಚಿವ ಸುನಿಲ್ ಕುಮಾರ್
ಕಾರ್ಕಳ, ಆ.23: ತಾಲೂಕಿನ ಪ್ರವಾಸಿತಾಣಗಳನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸುವ ಉದ್ದೇಶದಿಂದ ಪ್ರವಾಸೋದ್ಯಮಕ್ಕೆ ಅಧಿಕ ಒತ್ತು ನೀಡಲಾಗುವುದು ಎಂದು ರಾಜ್ಯ ಇಂಧನ ಮತ್ತು ಕನ್ನಡ-ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಸೋಮವಾರ ಕಾರ್ಕಳದ ಆನೆಕೆರೆ ಬಸದಿಯ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿದ ಬಳಿಕ ಅವರು ಮಾತನಾಡುತಿದ್ದರು.
ಸೋಮವಾರ ಕಾರ್ಕಳದ ಆನೆಕೆರೆ ಬಸದಿಯ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿದ ಬಳಿಕ ಅವರು ಮಾತನಾಡುತಿದ್ದರು.
ಕಾರ್ಕಳದ ಜೈನರ ಆನೆಕೆರೆ ಬಸದಿಯನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಬೇಕು ಎನ್ನುವ ಹಿನ್ನೆಲೆಯಲ್ಲಿ 2 ಕೋಟಿ ರೂ.ವೆಚ್ಚದ ಕಾಮಗಾರಿ ನಡೆಯುತಿದ್ದು, ಬಸದಿ ಜೀರ್ಣೋದ್ಧಾರ ಹಾಗೂ ಸಂಗೀತ ಕಾರಂಜಿ ನಿರ್ಮಾಣ ವೀಕ್ಷಕರ ಗ್ಯಾಲರಿ ನಿರ್ಮಾಣ ಕಾಮಗಾರಿಗೆ ಸರಕಾರದಿಂದ 50 ಲಕ್ಷರೂ ಅನುದಾನ ಜೊತೆಗೆ ಸೇತುವೆ ತಡೆಗೋಡೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದರು.
ಸಾಣೂರಿನ ಮಠದಕೆರೆ ಮತ್ತು ರಾಮಸಮುದ್ರ ಅಭಿವೃದ್ಧಿಯನ್ನು ಕೈಗೊಳ್ಳಲು ಯೋಜನೆ ಸಿದ್ದವಾಗಿದೆ. ಮುಂದಿನ ದಿನಗಳಲ್ಲಿ ಎರಡೂ ಕೆರೆಗಳನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುತ್ತದೆ. ಕೋಟಿ ಚೆನ್ನಯ ಥೀಂ ಪಾರ್ಕ್, ಬೈಲೂರಿನಲ್ಲಿ ರುವ ಪರಶುರಾಮ ಕೇಂದ್ರ ಹೀಗೆ ಎಲ್ಲ ದೃಷ್ಟಿಯಿಂದಲೂ ಕಾರ್ಕಳ ತಾಲೂಕು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳ್ಳಲಿದೆ ಎಂದರು.
ಆನೆಕೆರೆ ಬಳಿಯ ಮಸೀದಿ ಹತ್ತಿರದಿಂದ ರಂಗನಾಥ ಕೆಫೆ ತನಕದ ರಸ್ತೆಯನ್ನು ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕಿದ್ದು, ರಸ್ತೆ ಹಾದು ಹೋಗುವ ಪ್ರದೇಶಗಳ ಎರಡು ಖಾಸಗಿ ಭೂಮಾಲಕರ ಜತೆ ಮಾತುಕತೆ ನಡೆಸಲಾಗಿದೆ. ಎರಡೂ ಮನೆಗಳ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ. ನಂತರ ಆನೆಕೆರೆಗೆ ತಡೆಗೋಡೆ ಕಟ್ಟಿ, ಹೂಳೆತ್ತಲಾಗುವುದು ಎಂದು ಸಚಿವರು ವಿವರಿಸಿದರು.
ಹೊರಜಿಲ್ಲೆ ಹಾಗೂ ಹೊರ ತಾಲೂಕಿನಿಂದ ಆಗಮಿಸುವ ಪ್ರವಾಸಿಗರ ವೀಕ್ಷಣೆಗೆಅನುಕೂಲವಾಗುವಂತೆ ಪ್ರವಾಸಿ ತಾಣಗಳ ಕಾಮಗಾರಿಗಳನ್ನು ಅದಷ್ಟೂ ಬೇಗ ಪೂರ್ಣಗೊಳಿಸಬೇಕು. ಪ್ರವಾಸೊದ್ಯಮಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆ ಗಳನ್ನು ಒಳಗೊಂಡ ಕಾರ್ಕಳ ನಗರವು ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕು ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಪುರಸಭೆ ಮುಖ್ಯಾಧಿಕಾರಿ ರೂಪಾ ಡಿ.ಶೆಟ್ಟಿ, ಕೆಆರ್ಐಡಿಎಲ್ ಅಧಿಕಾರಿ ಪ್ರಭಾಕರ್, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಹಾವೀರ ಹೆಗ್ಡೆ ಉಪಸ್ಥಿತರಿದ್ದರು. ಗುಣಪಾಲ ಕಡಂಬ ಕಾರ್ಯಕ್ರಮ ನಿರೂಪಿಸಿದರು.