ಸುಂಟಿಕೊಪ್ಪ: ಲಾರಿ ಮಗುಚಿ ಬಿದ್ದು ಮಹಿಳೆ ಮೃತ್ಯು
ಮಡಿಕೇರಿ: ಕಾಸರಗೋಡಿಗೆ ನೂತನ ಸ್ಕೂಟರ್ ಗಳನ್ನು ಸಾಗಿಸುತ್ತಿದ್ದ ಲಾರಿಯೊಂದ ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದ ಪರಿಣಾಮ ವಾಯುವಿಹಾರಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪ ಗದ್ದೆಹಳ್ಳ ಎಂಬಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ರಾಮನಾಥಪುರದ ನಿವಾಸಿ ಜಿಖ ಎಂಬವರ ಪತ್ನಿ ದಿಲ್ಶಾದ್ (53) ಅವರೇ ಮೃತ ದುರ್ದೈವಿ.
ಸುಂಟಿಕೊಪ್ಪದ 3ನೇ ವಾರ್ಡ್ನಲ್ಲಿರುವ ತನ್ನ ಸಂಬಂಧಿಕರ ಸಾವಿಗೆಂದು ಬಂದಿದ್ದ ಇವರು ಇಂದು ಬೆಳಗ್ಗೆ ವಾಯುವಿಹಾರಕ್ಕೆಂದು ತೆರಳಿದ್ದರು. ಇದೇ ಸಂದರ್ಭ ಸ್ಮಶಾನಕ್ಕೆ ಪ್ರಾರ್ಥನೆ ಸಲ್ಲಿಸಲೆಂದು ಹೋಗಿದ್ದ ಸಂಬಂಧಿಕರು ಮರಳುವಾಗ ಲಾರಿಯಡಿ ಸಿಲುಕಿ ನರಳುತ್ತಿದ್ದ ಚಾಲಕನನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದ ಸಾರ್ವಜನಿಕರಿಗೆ ಸಹಕಾರ ನೀಡಿದರು. ನಂತರ ಕ್ರೈನ್ ತಂದು ಲಾರಿಯನ್ನು ಮೇಲೆತ್ತಿದಾಗಲಷ್ಟೇ ದಿಲ್ಶಾದ್ ಅವರು ಲಾರಿಯಡಿ ಸಿಲುಕಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಹೊಸೂರಿನಿಂದ ಲಾರಿಯಲ್ಲಿ ಸ್ಕೂಟರ್ ಗಳನ್ನು ತುಂಬಿಸಿಕೊಂಡು ಚಾಲಕ ಶಿವಶಕ್ತಿ ಎಂಬವರು ಕಾಸರಗೋಡಿನ ಶೋರೂಮ್ಗೆ ಸಾಗಿಸುತ್ತಿದ್ದಾಗ ಘಟನೆ ಸಂಭವಿಸಿದೆ.
ಸುಂಟಿಕೊಪ್ಪ ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿ ಎ.ಎಸ್.ಐ.ಕಾವೇರಪ್ಪ, ಮುಖ್ಯಪೇದೆ ಸತೀಶ್ ಹಾಗೂ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.