ಪಜೀರು ಮಸೀದಿ ಅಧ್ಯಕ್ಷ ಹಾಜಿ ಅಬ್ದುರ್ರಝಾಕ್ ನಿಧನ
ಕೊಣಾಜೆ : ಪಜೀರು ರಹ್ಮಾನ್ ಜುಮಾ ಮಸೀದಿಯ ಅಧ್ಯಕ್ಷರೂ, ಉದ್ಯಮಿಯೂ ಆಗಿದ್ದ ಹಾಜಿ ಅಬ್ದುರ್ರಝಾಕ್ (56) ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಿಧನರಾದರು.
ಸ್ಥಳೀಯವಾಗಿ ಪಜೀರ್ ಅಬ್ಬಾಸ್ ಎಂದೇ ಪ್ರಸಿದ್ಧರಾಗಿದ್ದ ಇವರು ಕಳೆದ ಹದಿನೈದು ವರ್ಷಗಳಿಂದ ಸತತವಾಗಿ ಪಜೀರು ರಹ್ಮಾನ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಸೀದಿಯ ಆದಾಯಕ್ಕಾಗಿ ವಸತಿ ಸಂಕೀರ್ಣ, ಮಸೀದಿಯಂಗಳದಲ್ಲಿ ನೀರಿಂಗಿಸುವಿಕೆ, ನಾಯಕತ್ವ ತರಬೇತಿ ಶಿಬಿರ ಮುಂತಾದ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಇವರ ಪಾತ್ರ ಬಹುದೊಡ್ಡದು. ಕನ್ನಡದಲ್ಲಿ ಉತ್ತಮ ಭಾಷಣಕಾರರಾಗಿದ್ದರು.
ಯೌವ್ವನದಲ್ಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡಿದ್ದ ಇವರು ಜಮೀಯತುತ್ತುಲಬಾ ಫ್ರೆಂಡ್ಸ್ ಅಸೋಸಿಯೇಶನ್ ಇದರ ಅಧ್ಯಕ್ಷರಾಗಿದ್ದ ಕಾಲದಲ್ಲಿ ರಕ್ತದಾನ ಶಿಬಿರ, ಬಡ ಮಕ್ಕಳಿಗೆ ಶೈಕ್ಷಣಿಕ ನೆರವು ಮುಂತಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸ್ಥಳೀಯರಾಗಿ ಜನಾನುರಾಗಿಯಾಗಿದ್ದರು.
ಪಜೀರಿನಲ್ಲಿ ಪರಂಪರಾಗತವಾಗಿ ಬಂದ ಮತೀಯ ಸೌಹಾರ್ದತೆಯನ್ನು ಉಳಿಸಿ ಬೆಳೆಸುವಲ್ಲಿ ಇವರ ಪಾತ್ರ ಹಿರಿದಾದುದು. ಮಂಗಳೂರು ಮತ್ತು ಉಡುಪಿಯಲ್ಲಿ ಲೈಟಿಂಗ್ ಉದ್ಯಮ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದ ಇವರು ಕೊಡುಗೈ ದಾನಿಯೂ ಆಗಿದ್ದರು.
ಅವರು ತಾಯಿ, ಪತ್ನಿ, ಮಕ್ಕಳು, ಸಹೋದರ ಸಹೋದರಿಯರನ್ನು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಪಜೀರಿನ ಸ್ವಗೃಹದಲ್ಲಿ ಸಂಜೆ ಐದರಿಂದ ರಾತ್ರಿ 8ರವರೆಗೆ ಪಾರ್ಥಿವ ಶರೀರದ ಸಂದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.