'ಮಹಿಳೆಯರ ಸುರಕ್ಷತೆ ದೇಶದ ಹೊಣೆ' ವೆಲ್ಫೇರ್ ಪಾರ್ಟಿ ರಾಜ್ಯವ್ಯಾಪಿ ಅಭಿಯಾನ ಪ್ರಯುಕ್ತ ವಿಚಾರಗೋಷ್ಠಿ
ಉಳ್ಳಾಲ : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮಹಿಳಾ ವಿಭಾಗದಿಂದ "ಮಹಿಳೆಯರ ಸುರಕ್ಷತೆ ದೇಶದ ಹೊಣೆ" ಎಂಬ ಘೋಷಣೆಯಲ್ಲಿ ಮಹಿಳಾ ಸುರಕ್ಷತಾ ಜಾಗೃತಿ ಅಭಿಯಾನವನ್ನು ಸೆ. 19 ರವರೆಗೆ ಹಮ್ಮಿಕೊಂಡಿದ್ದು, ಇದರ ಸಲುವಾಗಿ ಇತ್ತೀಚೆಗೆ ತೊಕ್ಕೊಟ್ಟುವಿನಲ್ಲಿ, ವಿಚಾರಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೇಶದಲ್ಲೆಡೆ, ಅವ್ಯಾಹತವಾಗಿ ನಡೆಯುತ್ತಿರುವ ಮಹಿಳಾ ದೌರ್ಜನ್ಯಕ್ಕೆದುರಾಗಿ, ಸಾರ್ವಜನಿಕ ಜಾಗೃತಿ ಮೂಡಿಸುವ ಉದ್ದೇಶದಿಂದ, ಇಲ್ಲಿನ ವೆಲ್ಫೇರ್ ಮಹಿಳಾ ವರ್ತುಲದ ಸದಸ್ಯೆಯರನ್ನೊಳಗೊಂಡ ಈ ಸಭೆಯಲ್ಲಿ, ಪಕ್ಷದ ದ.ಕ. ಜಿಲ್ಲಾ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಆಯಿಷಾ ಮಮ್ತಾಝ್ ವಾಮಂಜೂರು ಪ್ರಾಸ್ತಾವಿಕ ಭಾಷಣ ಮಾಡಿದ ನಂತರ, ದಲಿತ್ ಸೇವಾ ಸಮಿತಿ ಮಂಗಳೂರು ಇದರ ಉಪಾಧ್ಯಕ್ಷೆ ರೇಣುಕಾರವರ ಸ್ತ್ರೀ ಜಾಗೃತಿಯ ಬಗ್ಗೆ ತಮ್ಮ ವಿಚಾರ ಮಂಡನೆಯೊಂದಿಗೆ ಮಹಿಳಾ ಸಭಿಕರ ಚರ್ಚೆಗೆ ಚಾಲನೆ ನೀಡಿದರು.
ಸಭೆಯಲ್ಲಿ ನೆರೆದಿದ್ದ ಮಹಿಳೆಯರು, ಸ್ತ್ರೀ ದೌರ್ಜನ್ಯ ತಡೆಯ ಕುರಿತಂತೆ ಅನೇಕ ವಿಚಾರಗಳ ಮಂಡನೆ, ಚರ್ಚೆ, ಪ್ರಶ್ನೋತ್ತರ ಹೀಗೆ ವಿವಿಧ ಆಯಾಮದಲ್ಲಿ ಸಭಾ ಕಾರ್ಯಕ್ರಮಕ್ಕೆ ಚುರುಕನ್ನು ನೀಡಿದರು.
ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ವೆಲ್ಫೇರ್ ಪಕ್ಷದ ದ. ಕ. ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಮರಿಯಂ ಶಹೀರ ಮಾತನಾಡಿ ಮಹಿಳಾ ಸುರಕ್ಷತೆಯ ಈ ಅಭಿಯಾನದ ಮೂಲಕ ನಮ್ಮ ಪಕ್ಷವು ಸರಕಾರಕ್ಕೆ ತಮ್ಮ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸವನ್ನು ಮಾಡುತ್ತಿದೆಯೆಂದರು.
ಕಾರ್ಯಕ್ರವನ್ನು ನಿರೂಪಿಸಿದ ಅಭಿಯಾನ ಸಂಚಾಲಕಿ ಝೀನತ್ ಇಸ್ಮಾಯಿಲ್ ಸ್ವಾಗತಿಸಿ, ವಂದಿಸಿದರು.