ಮುಂಡ್ಕೂರು: ಸಾರ್ವಜನಿಕ ಸ್ಥಳದಲ್ಲಿಯೇ ಕಸ ಡಂಪಿಂಗ್
ಕಾರ್ಕಳ: ಗ್ರಾಮಸ್ಥರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಪಂಚಾಯತಿಯ ಅನತಿ ದೂರದಲ್ಲೇ ಹೇರಳ ಪ್ರಮಾಣದಲ್ಲಿ ತ್ಯಾಜ್ಯ ವಿಲೇವರಿಯಾಗುತ್ತಿದ್ದು ಗ್ರಾಮಸ್ಥರು ಆಕ್ರೋಶಿತರಾಗಿದ್ದಾರೆ.
ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವಲ್ಲಿ ವಿಭಿನ್ನ ಯೋಚನೆಯನ್ನು ಮಾಡಿದ್ದ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್ ಊರಿನ ಸ್ವಚ್ಚತೆಯನ್ನು ಕಾಪಾಡುವ ಪ್ರಯತ್ನದಲ್ಲಿದ್ದರೂ ಪಂಚಾಯತ್ ಕಟ್ಟಡದ ಅನತಿ ದೂರದಲ್ಲಿ ಮಾತ್ರ ಸ್ವಚ್ಚತೆಯನ್ನು ಕಾಯುವವಲ್ಲಿ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮುಂಡ್ಕೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಅಂಚೆ ಕಚೇರಿ, ರುದ್ರ ಭೂಮಿ ಹಾಗೂ ಗ್ರಾಮ ಪಂಚಾಯತಿ ಕಚೇರಿಯ ಪಕ್ಕದಲ್ಲಿಯೇ ರಸ್ತೆ ಬದಿಯಲ್ಲಿ ದಿನನಿತ್ಯ ಹೇರಳ ಪ್ರಮಾಣದಲ್ಲಿ ಎಸ್ಎಲ್ಆರ್ಎಮ್ ಘಟಕದ ವಾಹನದಲ್ಲಿ ತಂದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದಿಂದ ಹಿಡಿದು ಹಸಿ ಕಸ ಎಲ್ಲವನ್ನು ಇಲ್ಲಿ ಡಂಪ್ ಮಾಡಲಾಗುತ್ತಿದ್ದು ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ರಸ್ತೆಯ ಪಕ್ಕದಲ್ಲೇ ಸುರಿಯಲಾಗುವ ಈ ತ್ಯಾಜ್ಯ ರಾಶಿಯ ಪಕ್ಕದಲ್ಲೇ ಸಾರ್ವಜನಿಕರು ಹಾಗೂ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಸಂಚರಿಸಬೇಕಾಗಿದ್ದು, ಮೂಗು ಮುಚ್ಚಿ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ಇಲ್ಲಿ ಎದುರಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ಜೊತೆಯಲ್ಲಿ ಇತರ ತ್ಯಾಜ್ಯವನ್ನು ಇಲ್ಲೇ ಸುರಿಯುತ್ತಿದ್ದು ಸ್ಥಳೀಯಾಡಳಿತ ಮಾತ್ರ ಇಲ್ಲಿ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರೋಗ ಹರಡುವ ಭೀತಿ : ಮಳೆಗಾಲದ ಸಂದರ್ಭ ಮನೆಯ ಪಕ್ಕದಲ್ಲಿ ಎಳನೀರಿನ ಸಿಪ್ಪೆಯಲ್ಲಿ ಹಾಗೂ ಪ್ಲಾಸ್ಟಿಕ್ ವಸ್ತುಗಳಲ್ಲಿ ಮತ್ತು ಟಯರ್ಗಳಲ್ಲಿ ನೀರು ನಿಲ್ಲದಂತೆ ಆರೋಗ್ಯ ಇಲಾಖೆ ಮಾಹಿತಿಯನ್ನು ನೀಡುತ್ತದೆ. ಆದರೆ ಮುಂಡ್ಕೂರು ಗ್ರಾಮದಲ್ಲಿ ಜನವಸತಿ ಹಾಗೂ ಶಾಲೆಯ ಪಕ್ಕದಲ್ಲೇ ರಾಶಿ ರಾಶಿ ಎಳನೀರಿನ ಸಿಪ್ಪೆಯಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿದ್ದು ಪರಿಸರದ ಜನರಲ್ಲಿ ಮಲೇರಿಯಾ, ಡೆಂಗ್ಯೂನಂತಹ ರೋಗರುಜಿನಗಳು ಹರಡುವ ಭೀತಿ ಎದುರಾಗಿದೆ.
ಮುಂಡ್ಕೂರು ಗ್ರಾಮದ ಮನೆ ಹಾಗೂ ಅಂಗಡಿ ಮುಗ್ಗಟ್ಟುಗಳಿಂದ ಹಣ ಪಡೆದು, ಸಂಗ್ರಹಿಸಿದ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಬಳಿಕ ಹಸಿ ಕಸವನ್ನು ತಂದು ರಸ್ತೆಯ ಪಕ್ಕದಲ್ಲಿ ಪಂಚಾಯತಿಯವರೇ ಸುರಿಯುತ್ತಾರೆ. ಊರಿನ ಜನರಿಗೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಪಂಚಾಯತಿಯವರೇ ಸಾರ್ವಜನಿಕರು ಓಡಾಡುವ ಪರಿಸರದಲ್ಲಿ ರಾಶಿ ರಾಶಿ ತ್ಯಾಜ್ಯವನ್ನು ಸುರಿಯುವುದು ಎಷ್ಟು ಸರಿ .? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಕೂಡಲೇ ಶಾಲೆಯ ಪಕ್ಕದಲ್ಲಿ ಸುರಿಯಲಾದ ತ್ಯಾಜ್ಯದ ರಾಶಿಯನ್ನು ತೆರವುಗೊಳಿಸಿ ಪರಿಸರವನ್ನು ಶುಚಿಗೊಳಿಸಬೇಕಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
''ಮನೆ ಪರಿಸರವೆಲ್ಲ ಸ್ವಚ್ಚವಾಗಿರುವಂತೆ ನಮಗೆ ಮಾಹಿತಿ ನೀಡುವ ತಿಳಿದವರೇ ರಸ್ತೆಯ ಪಕ್ಕದಲ್ಲಿ ಹೇರಳ ಪ್ರಮಾಣದಲ್ಲಿ ತ್ಯಾಜ್ಯವನ್ನು ಸುರಿಯುವುದು ಎಷ್ಟು ಸರಿ. ಕೊಳಚೆ ನೀರಿನಲ್ಲಿ ಸೊಳ್ಳೆಗಳು ಉತ್ಪತಿಯಾಗಿದ್ದು ರೋಗಗಳು ಹರಡುವ ಭೀತಿ ಎದುರಾಗಿದೆ''.
-ಸುಂದರ್, ಗ್ರಾಮಸ್ಥ.
ಸಮೀಪದಲ್ಲೇ ಶಾಲೆಯಿದೆ. ಇದೇ ರಸ್ತೆಯಲ್ಲಿ ಗ್ರಾಮಸ್ಥರು ಓಡಾಡುತ್ತಾರೆ. ರಸ್ತೆಯ ಪಕ್ಕದಲ್ಲಿ ತ್ಯಾಜ್ಯವನ್ನು ಸುರಿಯುವುದರಿಂದ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ.
- ಉಮೇಶ್ ಕುಮಾರ್, ಗ್ರಾಮಸ್ಥ.
ಈಗಾಗಲೇ ಗಮನಕ್ಕೆ ಬಂದಿದೆ. ಮೀಟಿಂಗ್ನಲ್ಲಿಯೂ ಈ ಬಗ್ಗೆ ಚರ್ಚೆಯಾಗಿದ್ದು ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
- ಸುಶೀಲ, ಮುಂಡ್ಕೂರು ಗ್ರಾ.ಪಂ ಅಧ್ಯಕ್ಷೆ.