ಸೆ.25ರಂದು ಬ್ಯಾರೀಸ್ ಗ್ರೂಪ್ ನಿಂದ 'ಗ್ರೀನ್ ವಾಕಥಾನ್'
ಮಂಗಳೂರು, ಸೆ.23: ಬ್ಯಾರೀಸ್ ಗ್ರೂಪ್ ವತಿಯಿಂದ ಸೆ.25ರಂದು 'ಗ್ರೀನ್ ವಾಕಥಾನ್-2021' ಆಯೋಜಿಸಲಾಗಿದೆ ಎಂದು ಬ್ಯಾರೀಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಐಟಿ) ಪ್ರಾಂಶುಪಾಲ ಡಾ.ಎಸ್.ಐ. ಮಂಜೂರು ಬಾಷಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಿಐಟಿ ಹಾಗೂ ಬ್ಯಾರೀಸ್ ಎನ್ವಿರೋ ಅರ್ಕಿಟೆಕ್ಚರ್ ಡಿಸೈನ್ ಸ್ಕೂಲ್ ( ಬೀಡ್ಸ್)ಗಳು ವಿಶ್ವ ಹಸಿರು ಕಟ್ಟಡ ಸಪ್ತಾಹದ ಪ್ರಯುಕ್ತ ಈ ‘ಗ್ರೀನ್ ವಾಕಥಾನ್’ ಹಮ್ಮಿಕೊಂಡಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಿಂದ ಬಿಐಟಿ ಕ್ಯಾಂಪಸ್ ವರೆಗೆ ನಡೆಯುವ 5 ಕಿ.ಮೀ. ಉದ್ದದ ವಾಕಥಾನ್ ಗೆ ಅಂದು ಬೆಳಗ್ಗೆ 7ಕ್ಕೆ ಮಂಗಳೂರು ವಿವಿಯ ಉಪ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹಸಿರು ನಿಶಾನೆ ತೋರುವರು. ಬಿಐಟಿ ಕ್ಯಾಂಪಸ್ನಲ್ಲಿ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಗಿಡ ನೆಡುವುದರೊಂದಿಗೆ ವಾಕಥಾನ್ ಸಮಾರೋಪಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸುಸ್ಥಿರ ಅಭಿವೃದ್ಧಿ, ಇಂಧನ ಉಳಿತಾಯ, ಮರುಬಳಕೆ ಮತ್ತು ಸ್ವಚ್ಛ ಹಾಗೂ ಹಸಿರು ನಗರವನ್ನು ಉತ್ತೇಜಿಸುವ ಮೂಲಕ ಜಾಗೃತಿ ಮೂಡಿಸುವುದು ಈ ‘ಗ್ರೀನ್ ವಾಕಥಾನ್’ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
ಬ್ಯಾರೀಸ್ ಗ್ರೂಪ್ ಇನ್ನೋಳಿಯ ಬ್ಯಾರಿಸ್ ನಾಲೆಡ್ಜ್ ಕ್ಯಾಂಪಸ್ ನಲ್ಲಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ), ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್) ಮತ್ತು ಬಿಐಟಿ ಪಾಲಿಟೆಕ್ನಿಕ್ ಸಂಸ್ಥೆಗಳನ್ನು ಹೊಂದಿದೆ.
ಬ್ಯಾರೀಸ್ ಗ್ರೂಪ್ನ ದೃಷ್ಟಿಕೋನವು ಪ್ರಗತಿಪರ, ಶಾಂತಿಯುತ ಹಸಿರು ಜಗತ್ತಿಗೆ ಗಣನೀಯ ಕೊಡುಗೆ ನೀಡುವುದರೊಂದಿಗೆ ತಂತ್ರಜ್ಞಾನದ ಪ್ರತಿಯೊಂದು ಕ್ಷೇತ್ರದಲ್ಲಿ ನಾಯಕರನ್ನು ಸೃಷ್ಟಿಸುವುದು. ಬ್ಯಾರೀಸ್ ಕ್ಯಾಂಪಸ್ ಸುಸ್ಥಿರ ಹಸಿರು ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಹಾಗೂ ಪ್ರಕೃತಿಯ ಮತ್ತು ಸಂಸ್ಕೃತಿಯು ಒಟ್ಟಾಗಿ ಸೇರಿಕೊಳ್ಳುವ ಭವಿಷ್ಯದ ಕಲ್ಪನೆಯನ್ನು ಪರಿಚಯಿಸುತ್ತದೆ.
ವಿಶ್ವದಲ್ಲಿ ಬದಲಾಗುತ್ತಿರುವ ನಿರಂತರ ಹವಾಮಾನ ಬದಲಾವಣೆ, ಮನುಕುಲಕ್ಕೆ ದೊಡ್ಡ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ ಭೂಮಿಯನ್ನು ರಕ್ಷಿಸುವ ಮಾನವನ ಜವಾಬ್ದಾರಿಗಳು ಹಲವಾರು ಪಟ್ಟು ಹೆಚ್ಚಾಗಿದೆ. ಇಂಧನ ಸಂರಕ್ಷಣೆ, ಇಂಧನ ಉಳಿಸುವ ತಂತ್ರಜ್ಞಾನಗಳು ಮತ್ತು ಮೂಲಸೌಕರ್ಯಗಳ ಬಳಕೆ; ನವೀಕರಿಸಬಹುದಾದ ಇಂಧನ ಮೂಲಗಳನ್ನು ಹುಡುಕುವ ಪ್ರಯತ್ನಗಳು, ಹಸಿರು ಕಟ್ಟಡಗಳಲ್ಲಿನ ಅಂತರ್ಗತವಾಗಿರುವ ಅನೇಕ ಸಸ್ಯಗಳು / ಮರಗಳು, ಜಾಗತಿಕ ತಾಪಮಾನ ಕಡಿಮೆ ಮಾಡುವುದು, ಗ್ರೀನ್ ಹೌಸ್ ಗ್ಯಾಸ್ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ನೀತಿ, ಹೀಗೆ ಅನೇಕ ಭವಿಷ್ಯದಲ್ಲಿ ಉತ್ತಮ ಕಾಳಜಿ ಮತ್ತು ಸಮರ್ಥನೀಯವಾಗಿರಬೇಕು ಎಂಬುದು ಬ್ಯಾರೀಸ್ ಗ್ರೂಪ್ ನ ಆಶಯವಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬೀಡ್ಸ್ ಪ್ರಾಂಶುಪಾಲ ಅರ್. ಅಶೋಕ್ ಎಲ್.ಪಿ. ಮೆಂಡೋನ್ಸಾ, ಬಿಐಟಿ-ಮಂಗಳೂರು ಇದರ ಇಸಿಇ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ ಉಪಸ್ಥಿತರಿದ್ದರು.