ಉಡುಪಿ: ಸೆ.27ರ ಭಾರತ್ ಬಂದ್ಗೆ ದಸಂಸ ಬೆಂಬಲ
ಉಡುಪಿ, ಸೆ.25: ದೇಶಾದ್ಯಂತ ಸೆ.27ರಂದು ನಡೆಯಲಿರುವ ಭಾರತ್ ಬಂದ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಬಿಜೆಪಿ ಸರಕಾರ ಜಾರಿಗೆ ತಂದಿರುವ ಮೂರು ಕರಾಳ ಕೃಷಿ ಕಾಯ್ದೆಗಳು, ವಿದ್ಯುತ್ ಮಸೂದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಬೆಲೆ ಏರಿಕೆ ಮೊದಲಾದ ಜನವಿರೋಧಿ ಆಡಳಿತವನ್ನು ವಿರೋಧಿಸಿ ಭಾರತ್ ಬಂದ್ನ್ನು ಉಡುಪಿಯಲ್ಲೂ ಸಹ ನಡೆಸಲಾಗುವುದೆಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ತಿಳಿಸಿದ್ದಾರೆ.
ಹಲವು ಸಮಾನ ಮನಸ್ಕ ಜನಪರ ಸಂಘಟನೆಗಳೊಂದಿಗೆ ಕೂಡಿಕೊಂಡು 27ರಂದು ಬೃಹತ್ ಪ್ರತಿಭಟನೆ ನಡೆಲಾಗುವುದು.
ಜೋಡುಕಟ್ಟೆಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಜಿಲ್ಲಾ ಸಂಘಟನಾ ಸಂಚಾಲಕರಾದ ಅಣ್ಣಪ್ಪನಕ್ರೆ, ಗೋಪಾಕೃಷ್ಣ ಕುಂದಾಪುರ, ಪರಮೇಶ್ವರ್ ಉಪ್ಪೂರು, ಶ್ಯಾಮ ಸುಂದರ ತೆಕ್ಕಟ್ಟೆ, ಶ್ರೀಧರ ಕುಂಜಿಬೆಟ್ಟು, ತಾಲೂಕು ಸಂಚಾಲಕರಾದ ಶಂಕರ್ ದಾಸ್ ಚೆಂಡ್ಕಳ, ವಡ್ಡರ್ಸೆ ಶ್ರೀನಿವಾಸ, ವಿಠಲ್ ಉಚ್ಚಿಲ, ದೇವು ಹೆಬ್ರಿ, ರಾಘವ ಕುಕುಜೆ, ನಾಗರಾಜ್ ಕುಂದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಸಾಲಿಡಾರಿಟಿ ಯೂತ್’ ಮೂವ್ಮೆಂಟ್' ಬೆಂಬಲ
ದೇಶಾದ್ಯಂತ ರೈತ ಸಂಘಟನೆಗಳು ಕರೆ ನೀಡಿರುವ ಸೆ.27ರ ಭಾರತ್ ಬಂದ್’ಗೆ ಸಾಲಿಡಾರಿಟಿ ಯೂತ್’ ಮೂವ್ಮೆಂಟ್ ಉಡುಪಿ ಜಿಲ್ಲಾ ಘಟಕ ಬೆಂಬಲ ವ್ಯಕ್ತಪಡಿಸಿದೆ.
ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ಹಮ್ಮಿ ಕೊಂಡಿರುವ ಜಾಥ ಮತ್ತು ಸಭೆಯಲ್ಲಿ ಉಡುಪಿ ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ನದಾತರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಸಾಲಿಡಾರಿಟಿ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಸೈಯದ್ ಅಕ್ರಮ್ ವಿನಂತಿಸಿದ್ದಾರೆ.