ಅಲೋಶಿಯಸ್ ಈಜುಕೊಳಕ್ಕೆ ನಿಹಾರ್ ಅಮೀನ್ ಭೇಟಿ
ಮಂಗಳೂರು, ಅ.17: ಬೆಂಗಳೂರಿನಲ್ಲಿ ಅ.19ರಂದು ನಡೆಯುವ ರಾಷ್ಟ್ರೀಯ ಮಟ್ಟದ ಈಜು ಚಾಂಪಿಯನ್ಷಿಪ್ಗೆ ಕರ್ನಾಟಕದ ಈಜುಪಟುಗಳನ್ನು ಸಿದ್ಧಪಡಿಸುತ್ತಿದ್ದು, ಹೆಚ್ಚಿನ ಪದಕಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಟೋಕಿಯೊ ಒಲಿಂಪಿಕ್ಸ್-ಟೀಮ್ ಇಂಡಿಯಾ ಕೋಚ್, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ನಿಹಾರ್ ಅಮೀನ್ ಹೇಳಿದರು.
ನಗರದ ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳಕ್ಕೆ ರವಿವಾರ ಭೇಟಿ ನೀಡಿ, ತರಬೇತುದಾರರು ಮತ್ತು ಈಜುಪಟುಗಳ ಜತೆ ಅವರು ಮಾತನಾಡಿದರು.
ಮಂಗಳೂರಿನಲ್ಲಿ ಅತ್ಯುತ್ತಮ ಮೂಲಸೌಕರ್ಯಗಳ ಈಜುಕೊಳ ಹಾಗೂ ಉತ್ತಮ ತರಬೇತುದಾರರಿದ್ದಾರೆ. ಇದರಿಂದಾಗಿ ಇಲ್ಲಿಯ ಏಳು ಮಕ್ಕಳು ರಾಜ್ಯಮಟ್ಟದಲ್ಲಿ 33 ಪದಕ ಗೆದ್ದಿದ್ದಾರೆ. ಈ ಮಕ್ಕಳಿಗೆ ಒಳ್ಳೆಯ ಭವಿಷ್ಯವಿದೆ ಎಂದು ಅವರು ಹೇಳಿದರು.
ಸಂತ ಅಲೋಶಿಯಸ್ ಸಂಸ್ಥೆಗಳ ರೆ.ಫಾ. ಮೆಲ್ವಿನ್, ಡಾಲಿನ್ ಆ್ಯಕ್ಟಿಕ್ ಕ್ಲಬ್ನ ಮುಖ್ಯ ತರಬೇತುದಾರ ಮಧು ಬಿ.ಎಂ., ಅಲೋಶಿಯಸ್ ಕಾಲೇಜಿನ ಈಜುಕೊಳದ ವಿ ಒನ್ ಅಕ್ವಾ ಸೆಂಟರ್ನ ನಿರ್ದೇಶಕ ನವೀನ್, ರೂಪಾ ಪ್ರಭು, ತರಬೇತು ದಾರರಾದ ಲೋಕರಾಜ್ ವಿಟ್ಲ, ಯಜ್ಞೇಶ್ ಬೆಂಗರೆ ಉಪಸ್ಥಿತರಿದ್ದರು.