ಉಪ್ಪಿನಂಗಡಿಯಲ್ಲಿ ರಸ್ತೆ ಅಪಘಾತ: ಓರ್ವ ಯುವಕ ಸ್ಥಳದಲ್ಲೇ ಮೃತ್ಯು, ಇನ್ನೋರ್ವ ಗಂಭೀರ
ಉಪ್ಪಿನಂಗಡಿ, ಅ.19: ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅತೀ ವೇಗದಿಂದ ಬಂದ ಟೆಂಪೋವೊಂದು ದ್ವಿಚಕ್ರ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಾಯಗೊಂಡ ಘಟನೆ ಗೋಳಿತೊಟ್ಟು ಸಮೀಪದ ಸಣ್ಣಂಪಾಡಿ ಎಂಬಲ್ಲಿ ಮಂಗಳವಾರ ನಡೆದಿದೆ.
ಮಂಗಳೂರಿನ ಕುಂಟಲ್ಪಾಡಿ ಪದವು ನಿವಾಸಿ ಸಚಿನ್ (29) ಮೃತ ದ್ವಿಚಕ್ರ ಸವಾರ. ಇವರೊಂದಿಗೆ ಪ್ರಯಾಣಿಸುತ್ತಿದ್ದ ಬೆಳ್ತಂಗಡಿಯ ಅಂಕಿತ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ: ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುತ್ತಿದ್ದ ಮೀನು ಸಾಗಾಟದ ಟೆಂಪೋ ಸಣ್ಣಂಪಾಡಿ ಎಂಬಲ್ಲಿ ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ಸಂದರ್ಭ ದ್ವಿಚಕ್ರ ಸವಾರರು ರಸ್ತೆಗೆಸೆಯಲ್ಪಟ್ಟಿದ್ದು, ಸಚಿನ್ ಎಂಬವರ ತಲೆಯ ಮೇಲೆ ಟೆಂಪೋದ ಚಕ್ರಗಳು ಹರಿದಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಟೆಂಪೋವು ಹೆದ್ದಾರಿ ಬದಿಯ ತೋಡಿಗೆ ಇಳಿದಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.