ಅಪಘಾತ ಪ್ರಕರಣ: ಆರೋಪಿ ಟೆಂಪೋ ಚಾಲಕನಿಗೆ ಜೈಲುಶಿಕ್ಷೆ
ಉಡುಪಿ, ಅ.29: ಏಳು ವರ್ಷಗಳ ಹಿಂದೆ ಅಪಘಾತ ನಡೆಸಿ ಮಹಿಳೆಯ ಸಾವಿಗೆ ಕಾರಣನಾದ ಪ್ರಕರಣದ ಆರೋಪಿ ವಾಹನ ಚಾಲಕನಿಗೆ ಉಡುಪಿ ಒಂದನೇ ಹೆಚ್ಚುವರಿ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ನೀಡಿದೆ.
ಟೂರಿಸ್ಟ್ ವಾಹನ ಚಾಲಕ ನವೀನ್ ಕುಮಾರ್(28) ಶಿಕ್ಷೆಗೆ ಗುರಿಯಾಗಿರುವ ಆರೋಪಿ. 2014ರ ಸೆ.5ರಂದು ಈತ ವಾಹನ ಚಾಲನೆ ಬ್ಯಾಡ್ಜ್ ಇಲ್ಲದೇ ಸಂತೆಕಟ್ಟೆ ಆಶೀರ್ವಾದ್ ಜಂಕ್ಷನ್ ರಾ.ಹೆ. 66ರಲ್ಲಿ ಅತೀ ವೇಗ ನಿರ್ಲಕ್ಷದಿಂದ ವಾಹನ ಚಲಾಯಿಸಿಕೊಂಡು ಬಂದು, ರಸ್ತೆ ದಾಟಲು ನಿಂತ ಸುಂದರಿ ಶೆಡ್ತಿ ಢಿಕ್ಕಿ ಹೊಡೆದನು. ಇದರಿಂದ ಗಂಭೀರವಾಗಿ ಗಾಯಗೊಂಡ ಸುಂದರಿ ಶೆಡ್ತಿ ಚಿಕಿತ್ಸೆಫಲಕಾರಿಯಾಗದೆ ಮೃತಪಟ್ಟಿದ್ದರು.
ಈ ಬಗ್ಗೆ ಉಡುಪಿ ಸಂಚಾರಿ ಠಾಣೆಯ ನಿರೀಕ್ಷಕರಾಗಿದ್ದ ಶ್ರೀಕಾಂತ ತನಿಖೆ ನಡೆಸಿ, ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯ ಧೀಶ ಶ್ಯಾಮ್ ಪ್ರಕಾಶ್, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು, ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 11,100 ರೂ. ದಂಡವನ್ನು ವಿಧಿಸಿದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ.ವಾದ ಮಂಡಿಸಿದ್ದಾರೆ.