ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಉಡುಪಿ ಜಿಲ್ಲೆಯ ನಾಲ್ವರು ಸಾಧಕರ ಪರಿಚಯ
ಬನ್ನಂಜೆ ಬಾಬು ಅಮೀನ್, ಡಾ.ರಾಜಲಕ್ಷ್ಮೀ, ಪ್ರವೀಣ್ ಕುಮಾರ್, ರೋಹಿತ್ ಕುಮಾರ್
ಉಡುಪಿ : ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ನಾಲ್ವರು ಸಾಧಕರು ಆಯ್ಕೆಯಾಗಿದ್ದಾರೆ.
ಜಾನಪದ ವಿಭಾಗದಲ್ಲಿ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್(65), ಮಾಧ್ಯಮ ವಿಭಾಗದಲ್ಲಿ ಹಿರಿಯ ಪತ್ರಕರ್ತೆ ಡಾ.ಯು.ಬಿ. ರಾಜಲಕ್ಷ್ಮೀ(60), ಹೊರನಾಡು ಕನ್ನಡಿಗ ವಿಭಾಗದಲ್ಲಿ ದುಬೈ ಹೊಟೇಲ್ ಉದ್ಯಮಿ, ಅನಿವಾಸಿ ಕನ್ನಡಿಗ, ಕುಂದಾಪುರ ತಾಲೂಕಿನ ವಕ್ವಾಡಿ ಮೂಲದ ಪ್ರವೀಣ್ ಕುಮಾರ್(54), ಕ್ರೀಡಾ ವಿಭಾಗದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು(55) ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್
ತುಳು ಮತ್ತು ಕನ್ನಡದ ಸಮಗ್ರ ಜಾನಪದ ಮತ್ತು ದೈವಾರಾಧನೆ ಕುರಿತ ಅಧ್ಯಯನಕಾರ, ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ (65) 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಜಾಪದ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಉಪಾಧ್ಯಕ್ಷರಾಗಿ, ಕೆಮ್ಮಲಜೆ ಜಾನಪದ ಪ್ರಕಾಶನದ ಸ್ಥಾಪಕರಾಗಿ ಸೇವೆ ಸಲ್ಲಿಸಿರುವ ಇವರು, 1896ರಲ್ಲಿ ಯಕ್ಷಗಾನ ಕಲಾ ಕ್ಷೇತ್ರದ ಅರ್ಥ ಸಹಿತ ಕೋಟಿ ಚೆನ್ನಯ ಪ್ರಸಂಗ ರಚನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು.
‘ಕೋಟಿ ಚೆನ್ನಯ’, ‘ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥ’, ‘ತುಳು ಜಾನಪದ ಆಚರಣೆಗಳು’, ‘ಪೂ ಪೊದ್ದೊಲ್’ ತುಳು ಕಾದಂಬರಿ, ‘ದೈವಗಳ ಮಡಿಲಲ್ಲಿ’, ‘ಉಗುರಿಗೆ ಮುಡಿಯಕ್ಕಿ ಮತ್ತು ಇತರ ಕಥೆಗಳು’, ‘ಮಾನೆಚ್ಚಿ’ ತುಳು ಕಾದಂಬರಿ, ‘ನುಡಿ ಕಟ್ಟ್’, ‘ದೈವೊಲೆ ಕತೆಕುಲ್’, ‘ತುಳು ಜಾನಪದ ಆಚರ್ನೆ’, ‘ತುಳುನಾಡ ದೈವಗಳು’, ‘ತುಳುವೆರೆ ಮದಿಮೆ’ ಇವರ ತುಳು ಹಾಗೂ ಕನ್ನಡ ಪ್ರಮುಖ ಕೃತಿಗಳು. ಅಲ್ಲದೆ ಇವರು ಸುಮಾರು 200ಕ್ಕೂ ಅಧಿಕ ಜಾನಪದ ಸಂಶೋಧನಾ ಲೇಖನಗಳನ್ನು ಇವರು ಪ್ರಕಟಿಸಿದ್ದಾರೆ.
ಹವ್ಯಾಸಿ ಯಕ್ಷಗಾನ ಕಲಾವಿದರಾಗಿರುವ ಇವರು, ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿಯಿಂದ ಗ್ರಂಥ ಪುರಸ್ಕಾರ, ಕು.ಶಿ.ಜಾನಪದ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯಿಂದ ಕೃತಿ ಪುರಸ್ಕಾರ, ಸಂದೇಶ ತುಳು ಸಾಹಿತ್ಯ ಪ್ರಶಸ್ತಿ, 2008ನೆ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತುಳು ಸಾಹಿತ್ಯ ಸಂಶೋಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೇ ಇವರು ದೇಶ ವಿದೇಶಗಳಲ್ಲಿ ನೂರಾರು ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.
''ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ನನಗೆ ಸಂದಿರುವುದು ಅತ್ಯಂತ ಸಂತೋಷ ನೀಡಿದೆ. ಸುಮಾರು 40 ವರ್ಷಗಳಿಂದ ಸಾಹಿತ್ಯ ಸೇವೆ ತೋಡಗಿಸಿಕೊಂಡಿರುವ ನಾನು, ಸುಮಾರು 20 ವ್ಯಕ್ತಿ ಕೃತಿಗಳನ್ನು ರಚಿಸಿ, ಕೋಟಿ ಚೆನ್ನಯ್ಯ ಮತ್ತು ತುಳುನಾಡ ಗರಡಿಗಳು, ನಾರಾಯಣ ಗುರುಗಳ ಸೇವೆ, ದೈವಾರಾಧನೆ, ತುಳು ಜಾನಪದಕ್ಕೆ ಅಮೂಲ್ಯ ಕೊಡುಗೆ ನೀಡಿದ್ದೇನೆ ಎಂಬ ಸಂತೋಷ ನನಗೆ ಇದೆ. ಪ್ರಶಸ್ತಿಯು ನನ್ನ ಎಲ್ಲ ಆತ್ಮೀಯ ಅಭಿಮಾನಿಗಳಿಗೆ ಸಲ್ಲುತ್ತದೆ. - ಬನ್ನಂಜೆ ಬಾಬು ಅಮೀನ್
ಹಿರಿಯ ಪತ್ರಕರ್ತೆ ಡಾ.ರಾಜಲಕ್ಷ್ಮೀ
ಪತ್ರಿಕಾ ಕ್ಷೇತ್ರದಲ್ಲಿ 38 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ತರಂಗ ವಾರಪತ್ರಿಕೆಯ ಸಂಪಾದಕಿ ಹಾಗೂ ಹಿರಿಯ ಪತ್ರಕರ್ತೆ, ಕಾರ್ಕಳ ಕುಕ್ಕುಂದೂರಿನ ಡಾ.ಯು.ಬಿ. ರಾಜಲಕ್ಷ್ಮೀ(60) 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಪತ್ರಿಕೋದ್ಯಮದಲ್ಲಿ ಹಂಪಿ ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದಿರುವ ಮೊದಲ ಪತ್ರಕರ್ತೆ ಎಂಬ ಕೀರ್ತಿಗೆ ಪಾತ್ರರಾಗಿರುವ ಇವರು, 1983-87ರವರೆಗೆ ಮುಂಗಾರು, ಹೊಸ ದಿಗಂತ, ಟೈಮ್ಸ್ ಆಫ್ ಡೆಕ್ಕನ್ ದಿನಪತ್ರಿಕೆಗಳಲ್ಲಿ ವರದಿಗಾರ್ತಿಯಾಗಿ ಸೇವೆ ಸಲ್ಲಿಸಿದ್ದರು. 1987ರಲ್ಲಿ ತರಂಗ ವಾರಪತ್ರಿಕೆಯಲ್ಲಿ ವೃತ್ತಿ ಜೀವನ ಆರಂಭಿಸಿ, 2004ರಿಂದ ಕಾರ್ಯನಿರ್ವಾಹಕ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡಮಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ.
ಹಿರಿಯ ಸಾಹಿತಿ ಕೊರಡ್ಕಲ್ ಶ್ರೀನಿವಾಸ ರಾವ್-ಜೀವನ ಚರಿತ್ರೆ, ಉಡುಪಿ ಅಡುಗೆ, ನೂಪುರ, ಶಂಖನಾದ, ಕನ್ನಡದ ಆಯ್ದ ವಾರಪತ್ರಿಕೆಗಳಲ್ಲಿ ನುಡಿಚಿತ್ರ, ವಾರಪತ್ರಿಕೆಗಳಲ್ಲಿ ನುಡಿಚಿತ್ರ, ಪ್ರಿಯ ಓದುಗರೇ ಇವರ ಪ್ರಮುಖ ಕೃತಿಗಳು. ಮಂಗಳೂರು ಆಕಾಶವಾಣಿಯ ಬಿ ಹೈಗ್ರೇಡ್ ನಾಟಕ ಕಲಾವಿದೆಯಾಗಿದ್ದ ಇವರು, ಸುಮಾರು 250ಕ್ಕೂ ಅಧಿಕ ನಾಟಕಗಳು ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪ್ರಸಾರವಾಗಿವೆ.
ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ ಪ್ರಶಸ್ತಿ, ಪಾಟೀಲ ಪುಟ್ಟಪ್ಪ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರತಿಷ್ಠಿತ ಪ್ರಶಸ್ತಿ, ಸುಜಯಶ್ರೀ ಪ್ರಶಸ್ತಿ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಿಂದ ಎಸ್.ಎಫ್.ಉಪ್ಪಿನ ಐಎಫ್ಎಸ್ ಅತ್ಯುತ್ತಮ ಪತ್ರಕರ್ತೆ ಪ್ರಶಸ್ತಿ, ಕಮಲಾ ರಾಮಸ್ವಾಮಿ ಪ್ರಶಸಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಅವ್ವ ಸಾಹಿತ್ಯ ಪ್ರಶಸ್ತಿಗೆ ಇವರು ಪಾತ್ರರಾಗಿದ್ದಾರೆ.
ಹೊಟೇಲ್ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್
ದುಬೈ ಹೊಟೇಲ್ ಉದ್ಯಮಿ, ಅನಿವಾಸಿ ಕನ್ನಡಿಗ, ಕುಂದಾಪುರ ತಾಲೂಕಿನ ವಕ್ವಾಡಿ ಮೂಲದ ಪ್ರವೀಣ್ ಕುಮಾರ್ (54) 2021ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಹೊರನಾಡು ಕನ್ನಡಿಗ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಚೇರ್ಮನ್ ಆಗಿರುವ ಇವರು, ಯುಎಇ ಎನ್.ಆರ್.ಐ ಫೋರಂನ ಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಸದ್ಯ ಇವರು ದುಬೈಯಲ್ಲಿ ಆರು, ಭಾರತದಲ್ಲಿ 2, ಜಾರ್ಜಿಯಾದಲ್ಲಿ ಒಂದು ಹೋಟೆಲನ್ನು ಮುನ್ನಡೆಸುತ್ತಿದ್ದಾರೆ.
ಎರಡು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿರುವ ಇವರು, ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿ ದ್ದಾರೆ. ಕೋವಿಡ್ ಸಂದರ್ಭದಲ್ಲಿ ಚಾರ್ಟರ್ಡ್ ವಿಮಾನ ವ್ಯವಸ್ಥೆ ಮೂಲಕ ಕನ್ನಡಿಗರನ್ನು ತಾಯ್ನೆಡಿಗೆ ಕಳಿಸುವ ಕಾರ್ಯ ಮಾಡಿದ್ದಾರೆ. ಇವರು ಜಾರ್ಜಿಯಾ ಅವಾರ್ಡ್, ಬಂಟರ ಸಂಘದ ಪ್ರಶಸ್ತಿ, ಇಂಟರ್ ನ್ಯಾಶನಲ್ ಪೀಸ್ ಪ್ರಶಸ್ತಿ, ಬಹರೈನ್ ಕನ್ನಡ ಸಂಘ ಪ್ರಶಸ್ತಿ, ಕೇರಳದ ಶ್ರೇಯಸ್ ಅವಾರ್ಡ್, ಶಾರ್ಜಾದ ಮಯೂರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಕುವೆಂಪು ವಿಶ್ವಮಾನವ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್
ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲು(55) ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕ್ರೀಡಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ.
1994ರಿಂದ 1999ರವರೆಗಿನ ಐದು ವರ್ಷಗಳಲ್ಲಿ ಎತ್ತರ ಜಿಗಿತದ ಹೊಸ ದಾಖಲೆ(2.04 ಮೀಟರ್)ಗಳನ್ನು ಬರೆದ ಇವರು, 1984ರಿಂದ 1992ರ ವರೆಗೆ ಎಂಟು ಬಾರಿ ಕರ್ನಾಟಕದ ಚಿನ್ನದ ಸಾಧನೆಯನ್ನು ಮಾಡಿದ್ದರು. ರಾಷ್ಟ್ರೀಯ ಮಟ್ಟದಲ್ಲೂ ಮಿಂಚಿದ ಇವರು, ಎರಡು ಹೊಸ ಎತ್ತರ ಜಿಗಿತದ ದಾಖಲೆಗಳನ್ನು 1986ರಲ್ಲಿ ದಾಖಲಿಸಿದರು. ಅದೇ ವರ್ಷ ಗ್ರೀಸ್ ದೇಶದಲ್ಲಿ ನಡೆದ ವಿಶ್ವ ಜ್ಯೂನಿಯರ್ ವಿಭಾಗದ ಎತ್ತರ ಜಿಗಿತದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಇವರು, ಏಷ್ಯಾ ಖಂಡದ ಪ್ರತಿನಿಧಿಗಳಲ್ಲಿ ದ್ವಿ ತೀಯ ಸ್ಥಾನಿಯಾಗಿ ಹೊರಹೊಮ್ಮಿದರು.
ಬಣ್ಣದ ಕೊಡೆ ಸಿನೆಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಇವರು, ಪ್ರಧಾನ ಕಲಾವಿದರಾಗಿ ದೂರದರ್ಶನ ಧಾರಾವಾಹಿಯ ಕೋಟಿ ಚೆನ್ನಯ್ಯದ ಚೆನ್ನಯ್ಯನಾಗಿ, ಕಟೀಲು ಶ್ರೀದೇವಿ ಚರಿತೆಯಲ್ಲಿ ಪರಶುರಾಮ ನಾಗಿ, ಅಂಗೋಳಿ ಮಂಜಣ್ಣ ಚಿತ್ರದಲ್ಲಿ ಅಗೋಳಿ ಮಂಜಣ್ಣನಾಗಿ ಮಿಂಚಿದ್ದಾರೆ.
ಇವರು 1988ರಲ್ಲಿ ಬೆಸ್ಟ್ ಸ್ಪೋರ್ಟ್ಸ್ ಪರ್ಸನ್ ಆಫ್ ಇಯರ್ ‘ಸ್ವಾಬ್ ಅವಾರ್ಡ್’ ಪಡೆದುಕೊಂಡಿದ್ದರು. ಪ್ರಸ್ತುತ ಇವರು ಕಾರ್ಕಳದಲ್ಲಿ ಕಟೀಲ್ ಇಂಟರ್ ನ್ಯಾಶನಲ್ ಹೊಟೇಲ್ ಮುನ್ನಡೆಸುತ್ತಿದ್ದಾರೆ.