ಪುತ್ತಿಗೆಯ ಮಿಲನ್ ಶರೀಫ್ ರಿಗೆ "ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ" ಪ್ರದಾನ
ಮಂಗಳೂರು : ನಾಡು, ನುಡಿ, ಭಾಷೆ, ಸಮುದಾಯ ಮತ್ತು ಸಮಾಜದ ಒಳಿತು ಹಾಗೂ ಪ್ರಗತಿಗಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಪ್ರಶಸ್ತಿ, ಪುರಸ್ಕಾರಗಳ ಆಗ್ರಹವಿಲ್ಲದೆ ಶ್ರಮಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಯುನಿವೆಫ್ ಕರ್ನಾಟಕ ಪ್ರತಿ ವರ್ಷ "ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ" ಯನ್ನು ನೀಡಿ ಗೌರವಿಸುತ್ತಿದೆ.
2021ರ ಸಾಲಿನ "ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ" ಯನ್ನು ಮೂಡಬಿದ್ರೆ ಪುತ್ತಿಗೆಯ ಸಮಾಜ ಸೇವಕ ಮುಹಮ್ಮದ್ ಶರೀಫ್ (ಮಿಲನ್ ಶರೀಫ್) ಇವರಿಗೆ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತನಾಡಿ "ಯುನಿವೆಫ್ ಕರ್ನಾಟಕ ಯಾವುದೇ ಪ್ರಶಸ್ತಿ ಪುರಸ್ಕಾರಗಳ ಆಗ್ರಹವಿಲ್ಲದೆ ಸಮುದಾಯದ ಒಳಿತಿಗಾಗಿ ದುಡಿಯುತ್ತಿದ್ದು, ಮಿಲನ್ ಶರೀಫ್ ರಂಥ ನಿಸ್ವಾರ್ಥ ಮನೋಭಾವದ ವ್ಯಕ್ತಿಗಳ ಸೇವೆಯನ್ನು ಗುರುತಿಸಿ ಅಂಥವರನ್ನು ಪ್ರೋತ್ಸಾಹಿಸುವ ಸಲುವಾಗಿ, 'ಶೇಕ್ ಅಹ್ಮದ್ ಸರ್ ಹಿಂದಿ' ಇವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ." ಎಂದು ಹೇಳಿದರು.
ಬದ್ರಿಯಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಯೂಸುಫ್ ಡಿ. ಹಾಗೂ ಬದ್ರಿಯಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮುಹಮ್ಮದ್ ಇಕ್ಬಾಲ್ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮ ಸಂಚಾಲಕ ಸೈಫುದ್ದೀನ್ ಕುದ್ರೋಳಿ ಸನ್ಮಾನ ಪತ್ರ ವಾಚಿಸಿದರು.
ಈ ಸಂದರ್ಭ ಎಳೆಯ ಪ್ರಾಯದಲ್ಲಿ ಯೂಟ್ಯೂಬ್ ಚಾನೆಲ್ ನಲ್ಲಿ ಶಾನ್ ಮೀಡಿಯಾ ಎಂಬ ಮಾಧ್ಯಮ ರಚಿಸಿ ಸಾಧನೆಗೈದ ಉಳ್ಳಾಲದ ಹಝ್ರತ್ ಶಾಲೆಯ ವಿದ್ಯಾರ್ಥಿ ಶಾನ್ ಫರ್ಹಾನ್ ರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಯು. ಕೆ. ಖಾಲಿದ್ ಉಪಸ್ಥಿತರಿದ್ದರು.