ಕಾರು ಚಾಲಕಿಗೆ ಕಿರುಕುಳ ಆರೋಪ: ಸುರತ್ಕಲ್ ಟೋಲ್ಗೇಟ್ ಸಿಬ್ಬಂದಿ ಸೆರೆ
ಮಂಗಳೂರು, ನ.29: ಕಾರು ಚಾಲಕಿಯೊಬ್ಬರಿಗೆ ಮಾನಸಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಟೋಲ್ಗೇಟ್ ಸಿಬ್ಬಂದಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಯೋಗೀಶ್ ಎಂದು ಗುರುತಿಸಲಾಗಿದೆ.
ನ.27ರ ರಾತ್ರಿ ಸುಮಾರು 9 ಗಂಟೆಗೆ ಸೀಮಾ ರಂಜಿತ್ ಶೆಟ್ಟಿ ಎಂಬವರು ತನ್ನ ಗಂಡನ ಜೊತೆ ಕಾರಿನಲ್ಲಿ ಸುರತ್ಕಲ್ ಟೋಲ್ ಗೇಟ್ ಬಳಿ ತಲುಪಿ, ಎಡಬದಿ ರಸ್ತೆಯಲ್ಲಿ ತೆರಳಲು ಕಾರನ್ನು ಎಡಕ್ಕೆ ತಿರುಗಿಸಿದಾಗ ಆರೋಪಿ ಟೋಲ್ ಸಿಬ್ಬಂದಿ ಯೋಗೀಶ್ ಕಾರಿಗೆ ಅಡ್ಡ ನಿಂತು ಈ ರಸ್ತೆಯಲ್ಲಿ ಹೋಗಬಾರದು. ಬಲಬದಿಯ ಗೇಟ್ ಮೂಲಕ ತೆರಳುವಂತೆ ಒತ್ತಾಯಿಸಿದ. ಅಲ್ಲದೆ ಕಾರಿನ ಮುಂದೆ ಕೋನ್ಗಳನ್ನು ಅಡ್ಡವಾಗಿ ನಿಲ್ಲಿಸಿದ. 'ಈ ರೀತಿ ಯಾಕೆ ಮಾಡುತ್ತೀರಿ?' ಎಂದು ಸೀಮಾ ರಂಜಿತ್ ಶೆಟ್ಟಿ ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ 'ಹೊಡೆಯುವ ರೀತಿಯಲ್ಲಿ ಬಂದು ಮೈಗೆ ಕೈ ಹಾಕಲು ಯತ್ನಿಸಿ ಮಾನ ಹಾನಿ ಮಾಡಿದ ಎನ್ನಲಾಗಿದೆ. ಅಲ್ಲದೆ ತಡೆಯಲು ಮುಂದಾದ ಸೀಮಾ ಅವರ ಪತಿಗೂ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.
ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯೋಗೀಶ್ನನ್ನು ಬಂಧಿಸಿದ್ದಾರೆ.