ಅಕ್ರಮ ಮದ್ಯ ಮಾರಾಟ ಪ್ರಕರಣ : ಆರೋಪಿಗಳಿಗೆ ಶಿಕ್ಷೆ
ಉಡುಪಿ, ನ.29: ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2015ರ ಅಕ್ಟೋಬರ್ 2ರಂದು ಅಪರಾಹ್ನ ಒಂದು ಗಂಟೆಗೆ ಕೊಡವೂರು ಗ್ರಾಮದ ಮಲ್ಪೆ ಪಡುಕೆರೆ ಜಟ್ಟಿಗೆ ಹೋಗುವ ಸಾರ್ವಜನಿಕ ರಸ್ತೆಯ ಮೀನಿನ ಬಲೆ ಇಡುವ ಶೆಡ್ಡಿನ ಬಳಿ ಜಯಪ್ರಕಾಶ್ ಭಂಡಾರಿ ಮತ್ತು ಮೋಹನ ಭಂಡಾರಿ ಎಂಬುವವರು 4 ಬಾಕ್ಸ್ಗಳಲ್ಲಿ ಅಕ್ರಮವಾಗಿ ಸುಮಾರು 30 ಲೀ. ಮದ್ಯವನ್ನು ಸಂಗ್ರಸಿ ಮಾರಾಟ ಮಾಡುತ್ತಿದ್ದ ವೇಳೆ, ಮಲ್ಪೆಯ ಕರಾವಳಿ ಕಾವಲು ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಮತ್ತು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾ ಧೀಶೆ ದೀಪಾ ಅವರು ಆರೋಪಿಗಳಾದ ಜಯಪ್ರಕಾಶ್ ಭಂಡಾರಿ ಮತ್ತು ಮೋಹನ ಭಂಡಾರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 20,000 ರೂ. ದಂಡ ವಿಧಿಸಿ, ತಿೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಬದರೀನಾಥ್ ರೈ ವಾದ ಮಂಡಿಸಿದ್ದರು.