ಕುಳಾಯಿ: ರಸ್ತೆ ದುರವಸ್ಥೆ, ಜಲಸಿರಿ ಯೋಜನೆಯ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಮಂಗಳೂರು, ನ.30: ಕುಳಾಯಿ, ಕಾನ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ದುರಸ್ಥಿ, ಸುರತ್ಕಲ್, ಕಾನ, ಎಮ್ಆರ್ ಪಿಎಲ್ ರಸ್ತೆ ದುರಸ್ಥಿಗೆ ಒತ್ತಾಯಿಸಿ, ಜಲಸಿರಿ ಯೋಜನೆಯ ಕೊಳವೆ ಅಳವಡಿಸುವಿಕೆಯಲ್ಲಿ ಉಂಟಾಗಿರುವ ಅವ್ಯವಸ್ಥೆ ಮತ್ತಿತರ ಸಮಸ್ಯೆಗಳನ್ನು ಸರಿಪಡಿಸಲು ಆಗ್ರಹಿಸಿ ಡಿವೈಎಫ್ಐ ಕಾನ, ಕುಳಾಯಿ ಘಟಕದ ವತಿಯಿಂದ ಕುಳಾಯಿ ಗುಡ್ಡೆಯಲ್ಲಿ ಪ್ರತಿಭಟನಾ ಧರಣಿ ನಡೆಯಿತು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಂಗಳೂರು ಪಾಲಿಕೆ ಜನಸಂಪರ್ಕವನ್ನು ಕಳೆದುಕೊಂಡಿದೆ. ನಗರ ಪಾಲಿಕೆ ಸದಸ್ಯರು ಜನರ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ರಸ್ತೆ ಗುಂಡಿ ಮುಚ್ಚುವ ಸಾಮಾನ್ಯ ತೇಪೆ ಕೆಲಸಕ್ಕೂ ಜನತೆ ಪ್ರತಿಭಟನೆ ನಡೆಸಬೇಕಾದ ದುರ್ಗತಿ ಬಂದಿದೆ ಎಂದರು.
ಕುಳಾಯಿ ರೈಲ್ವೇ ಮೇಲ್ಸೇತುವೆ ಆಳೆತ್ತರದ ಗುಂಡಿಗಳಿಂದಾಗಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದರೂ ಕನಿಷ್ಟ ಗುಂಡಿ ಮುಚ್ಚಲೂ ಅಧಿಕಾರಿಗಳು, ನಗರ ಪಾಲಿಕೆ ಸದಸ್ಯರು ಮುಂದಾಗುತ್ತಿಲ್ಲ. ರೈಲ್ವೆ ಇಲಾಖೆಯೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದ್ದ ಶಾಸಕ, ಸಂಸದರು ಕಾಣೆಯಾಗಿದ್ದಾರೆ ಎಂದು ಆರೋಪಿಸಿದರು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್, ಸುರತ್ಕಲ್ ಘಟಕದ ಕಾರ್ಯದರ್ಶಿ ಶ್ರೀನಾಥ್ ಕುಲಾಲ್, ನಾಗರಿಕ ಸಮಿತಿ ಕುಳಾಯಿ ಇದರ ಕಾರ್ಯದರ್ಶಿ ಗಂಗಾಧರ ಭಂಜನ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಡಿವೈಎಫ್ಐ ಮುಖಂಡರಾದ ಮಕ್ಸೂದ್ ಬಿ ಕೆ, ಅಜ್ಮಲ್ ಅಹ್ಮದ್, ನವಾಜ್ ಕುಳಾಯಿ,ಇಂತಿಯಾಜ್ ಕುಳಾಯಿ, ಸತೀಶ್ ಪಣಂಬೂರು, ಅನಿಲ್ ಡಿಸೋಜ, ಜೋಯ್, ಸಾಮಾಜಿಕ ಕಾರ್ಯಕರ್ತರಾದ ಸಲೀಂ ಶ್ಯಾಡೊ, ರಫೀಕ್ ಕುಳಾಯಿ, ಮೆಹಬೂಬ್ ಕಾನ, ಸ್ಥಳೀಯ ಪ್ರಮುಖರಾದ ಯಾದವ ಕುಳಾಯಿ, ಶೆರೀಫ್ ಜನತಾ ಕಾಲನಿ, ಸಮದ್ ಪ್ರಗತಿ ನಗರ, ಹರೀಶ್ ಕುಳಾಯಿ, ಲೋಕೇಶ್ ಕುಳಾಯಿ, ಪ್ರವೀಣ್, ನಿಷಾದ್, ಲಕ್ಷ್ಮೀಶ್ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.
ಸುರತ್ಕಲ್ ವಲಯ ಆಯುಕ್ತರಾದ ನಾಗರಾಜ್ ಧರಣಿಯ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.