ಕಟ್ಟಡ ಕಾರ್ಮಿಕರಿಗೆ ಬಾಕಿ ಇರುವ ಕೋವಿಡ್ ಪರಿಹಾರ ಧನ ಪಾವತಿಸಲು ಆಗ್ರಹಿಸಿ ಪ್ರತಿಭಟನೆ
ಮಂಗಳೂರು, ಡಿ.2: ಕೋವಿಡ್-ಲಾಕ್ಡೌನ್ ಸಂದರ್ಭ ಕಟ್ಟಡ ಕಾರ್ಮಿಕರಿಗೆ ಸರಕಾರ ಘೋಷಿಸಿರುವ 3,000 ರೂ. ಪರಿಹಾರ ಧನವು ಇನ್ನೂ ಸಿಕ್ಕಿಲ್ಲ. ತಕ್ಷಣ ಅದನ್ನು ವಿತರಿಸಬೇಕು ಎಂದು ಸಿಐಟಿಯು ದ.ಕ.ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ವತಿಯಿಂದ ಮಂಗಳೂರು ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಮುಂದೆ ಗುರುವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಫೆಡರೇಶನ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯು.ಜಯಂತ ನಾಯ್ಕ ಮಾತನಾಡಿ ದ.ಕ.ಜಿಲ್ಲೆಯಲ್ಲಿ 2018, 2019, 2020ರ ಕಟ್ಟಡ ಕಾರ್ಮಿಕರ ಸವಲತ್ತುಗಳು ಪಾವತಿಯಾಗದಿರುವುದು ಆತಂಕಕಾರಿಯಾದ ವಿಷಯ. ಇಲಾಖಾ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಎಲ್ಲಾ ಸವಲತ್ತುಗಳ ಅರ್ಜಿಯನ್ನು ವಿಲೇವಾರಿ ಮಾಡಬೇಕು ಎಂದು ಹೇಳಿದರು.
ಫೆಡರೇಶನ್ನ ಮುಂದಾಳುಗಳಾದ ಜನಾರ್ದನ ಕುತ್ತಾರ್, ದಿನೇಶ್ ಶೆಟ್ಟಿ, ವಸಂತಿ, ಪಾಂಡುರಂಗ, ಮೋಹನ ಶಕ್ತಿನಗರ, ನೋಣಯ್ಯ ಗೌಡ, ಕೃಷ್ಣಪ್ಪಮೂಡುಬಿದಿರೆ, ಶಿವರಾಮ ಶೆಟ್ಟಿ, ಆಗಸ್ಟಿನ್, ನಾಗರಾಜ್, ಜಯಶೀಲಾ, ಯಶೋಧಾ ಮಳಲಿ, ಮೋಹನ್ ಜಲ್ಲಿಗುಡ್ಡೆ, ತಿಮ್ಮಣ್ಣ ಕೊಂಚಾಡಿ, ರವಿಚಂದ್ರ ಕೊಂಚಾಡಿ ಅಶೋಕ್ ಶ್ರೀಯಾನ್ ಉಪಸ್ಥಿತರಿದ್ದರು.