ಬ್ರಹ್ಮಾವರ; ರೋಡ್ ರೋಲರ್ಗೆ ಸ್ಕೂಟರ್ ಢಿಕ್ಕಿ: ತಂದೆ ಮೃತ್ಯು, ಮಗಳು ಗಂಭೀರ
ಬ್ರಹ್ಮಾವರ, ಡಿ.5: ಸ್ಕೂಟರೊಂದು ರೋಡ್ ರೋಲರ್ಗೆ ಢಿಕ್ಕಿ ಹೊಡೆದ ಪರಿಣಾಮ ತಂದೆ ಮೃತಪಟ್ಟು, ಮಗಳು ತೀವ್ರವಾಗಿ ಗಾಯಗೊಂಡ ಘಟನೆ ಉಪ್ಪೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ ಸೇತುವೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಸ್ಕೂಟರ್ ಸವಾರ ಕುಂದಾಪುರ ನೇರಳಕಟ್ಟೆ ಕುಕ್ಕುಂಜೆ ನಿವಾಸಿ ವೆಂಕಟರಮಣ ಆಚಾರ್ಯ(55) ಎಂದು ಗುರುತಿಸಲಾಗಿದೆ. ಇವರ ಮಗಳು ಹಿಂಬದಿ ಸವಾರೆ ಭವ್ಯಶ್ರೀ(17) ತೀವ್ರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ವೇತನ ವಿತರಣಾ ಸಭೆಗೆ ತಂದೆ ಮಗಳು ಸ್ಕೂಟರ್ನಲ್ಲಿ ಕುಂದಾಪುರದಿಂದ ಉಡುಪಿ ಕಡೆ ಹೋಗುತ್ತಿದ್ದರು. ಈ ವೇಳೆ ಸಂತೆಕಟ್ಟೆ ಸೇತುವೆಯಲ್ಲಿ ಎದುರಿನಲ್ಲಿ ಹೋಗುತ್ತಿದ್ದ ರೋಡ್ ರೋಲರನ ಬದಿಗೆ ಸ್ಕೂಟರ್ ಢಿಕ್ಕಿ ಹೊಡೆಯಿತ್ತೆನ್ನ ಲಾಗಿದೆ. ಇದರ ಪರಿಣಾಮ ದ್ವಿಚಕ್ರ ವಾಹನ ಸಮೇತ ಸವಾರರಿಬ್ಬರು ರಸ್ತೆಗೆ ಬಿದ್ದರೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಸ್ಕೂಟರ್ ಸವಾರ ವೆಂಕಟ ರಮಣ ಆಚಾರ್ಯ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.