ರಸ್ತೆ ಅಪಘಾತದಲ್ಲಿ ತಂದೆ ಮೃತ್ಯು; ವಿದ್ಯಾಪೋಷಕ್ ವಿದ್ಯಾರ್ಥಿನಿ ಕುಟುಂಬಕ್ಕೆ ನೆರವು
ಉಡುಪಿ, ಡಿ.8: ಉಡುಪಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾಪೋಷಕ್ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಮಗಳು ವಿದ್ಯಾ ಪೋಷಕ್ ದ್ವಿತೀಯ ಪಿ.ಯು. ವಿದ್ಯಾರ್ಥಿನಿ ಭವ್ಯಶ್ರೀ ಜೊತೆ ಸ್ಕೂಟರ್ನಲ್ಲಿ ಬರುತ್ತಿರುವಾಗ ಕಲ್ಯಾಣಪುರ ಸೇತುವೆ ಬಳಿ ಅಪಘಾತದಲ್ಲಿ ಮೃತಪಟ್ಟ ತಂದೆ ನೇರಳಕಟ್ಟೆಯ ವೆಂಕಟರಮಣ ಆಚಾರ್ಯ ಕುಟುಂಬಕ್ಕೆ ನೆರವು ನೀಡಲಾಯಿತು.
ಭವ್ಯಶ್ರೀ ಅಲ್ಪಸ್ವಲ್ಪಗಾಯವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ. ಭವ್ಯಶ್ರೀ ತಾಯಿ ಅನಾರೋಗ್ಯ ಪೀಡಿತರಾಗಿದ್ದು ಇಬ್ಬರು ಹೆಣ್ಣುಮಕ್ಕಳ ಕುಟುಂಬ ತೀರಾ ಸಂಕಷ್ಟಕ್ಕೆ ತುತ್ತಾಗಿದೆ. ಡಿ.6ರಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯ ದರ್ಶಿ ಮುರಲಿ ಕಡೆಕಾರ್ ಹಾಗೂ ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿ ಸಂಸ್ಥೆಯ ವತಿಯಿಂದ 10,000ರೂ. ನೆರವು ನೀಡಿದರು.
ಈಕೆಯ ತಂಗಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದು ಇವರಿಬ್ಬರ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಕರ್ಣಾಟಕ ಬ್ಯಾಂಕ್ ವಹಿಸಿಕೊಳ್ಳುವುದೆಂದು ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಭರವಸೆ ನೀಡಿದ್ದಾರೆ.