ಸಂತೆಕಟ್ಟೆ ರಾ.ಹೆದ್ದಾರಿಯಲ್ಲಿನ ಸೂಚನಾ ಫಲಕಕ್ಕೆ ಲಾರಿ ಢಿಕ್ಕಿ: ಚಾಲಕ ಮೃತ್ಯು
ಉಡುಪಿ, ಡಿ.14: ಇನ್ಸಲೇಟರ್ ಲಾರಿಯೊಂದು ಸೂಚನಾ ಫಲಕದ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಸಂತೆಕಟ್ಟೆ ಬಳಿಯ ಶಮಾ ಹೋಂಡಾ ಶೋ ರೂಮ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಿ.14 ರಂದು ನಸುಕಿನ ವೇಳೆ ಒಂದು ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಭಟ್ಕಳ ಹೆಬ್ಳೆ ಮದೀನಾ ಕಾಲೋನಿಯ ನಿವಾಸಿ ಮುಹಮ್ಮದ್ ಸಾಧಿಕ್ ಎಂಬವರ ಮಗ ಮಹಮ್ಮದ್ ತೌಫಿಕ್(29) ಎಂದು ಗುರುತಿಸಲಾಗಿದೆ. ಲಾರಿಯಲ್ಲಿದ್ದ ಇನೋರ್ವ ಚಾಲಕ ಭಟ್ಕಳ ಹೆಬ್ಬಾಳ ಗ್ರಾಮದ ಮೆಕ್ಕಾ ಕಾಲೋನಿಯ ನಜುರುಲ್ಲಾ(32) ಗಾಯಗೊಂಡಿದ್ದಾರೆ.
ಕೇರಳದ ಚಾವಕಾಡದಿಂದ ಭಟ್ಕಳಕ್ಕೆ ಬರುತ್ತಿದ್ದ ಲಾರಿಯು ಸಂತೆಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ಮೇಲೆ ಹತ್ತಿ, ಕುಂದಾಪುರ- ಕಾರವಾರ_ ಪಣಜಿ ಸೂಚನಾ ಫಲಕದ ಕಂಬಕ್ಕೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿತು.
ಇದರಿಂದ ಗಂಭೀರವಾಗಿ ಗಾಯಗೊಂಡ ಚಾಲಕ ಮಹಮ್ಮದ್ ತೌಫಿಕ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ, ನಂತರ ಹೆಚ್ಚಿನ ಚಿಕೆತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ಮೃತಪಟ್ಟರು. ಅಪಘಾತದಿಂದ ಸೂಚನಾ ಫಲಕದ ಕಂಬ ಜಖಂಗೊಂಡಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.