ಮೂಡುಬಿದಿರೆ: ವಿದ್ಯಾಗಿರಿಯಲ್ಲಿ ಸ್ಕೂಟರ್ ಗೆ ಪೊಲೀಸ್ ಜೀಪ್ ಢಿಕ್ಕಿ: ಸವಾರ ಗಂಭೀರ
ಮೂಡುಬಿದಿರೆ, ಡಿ.27: ಇಲ್ಲಿನ ವಿದ್ಯಾಗಿರಿ ಜಂಕ್ಷನ್ನಲ್ಲಿ ದ್ವಿಚಕ್ರ ವಾಹನಕ್ಕೆ ಪೊಲೀಸ್ ಜೀಪ್ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಮಾರಿಯಾಡಿ ನಿವಾಸಿ, ಕೂಲಿ ಕಾರ್ಮಿಕ ಬಾವು ಬ್ಯಾರಿ ಗಾಯಗೊಂಡವರಾಗಿದ್ದಾರೆ.
ಬಾವು ಬ್ಯಾರಿ ಮೂಡುಬಿದಿರೆ ಕಡೆಯಿಂದ ಹಂಡೇಲು ಕಡೆಗೆ ಕೆಲಸಕ್ಕೆಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ವಿದ್ಯಾಗಿರಿಯ ಜಂಕ್ಷನ್ನಲ್ಲಿ ಮಂಗಳೂರು ಕಡೆಯಿಂದ ಮೂಡುಬಿದಿರೆ ಕಡೆಗೆ ಮರಳು ಟಿಪ್ಪರ್ ಅನ್ನು ಬೆನ್ನಟ್ಟಿಕೊಂಡು ಬರುತ್ತಿದ್ದ ಪೊಲೀಸ್ ಜೀಪ್ ಓವರ್ಟೇಕ್ ಮಾಡುವ ಭರದಲ್ಲಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಸ್ಕೂಟರ್ ನಜ್ಜುಗುಜ್ಜಾಗಿದ್ದು, ಬಾವು ಬ್ಯಾರಿ ಅವರ ತಲೆ ಹಾಗೂ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
Next Story