ವಾರಾಂತ್ಯ ಕರ್ಫ್ಯೂ : ಪುತ್ತೂರು ನಗರ ಸ್ಥಬ್ದ, ವಿರಳ ಜನಸಂಖ್ಯಾ ಓಡಾಟ
ಪುತ್ತೂರು: ಸರ್ಕಾರ ಆದೇಶಿಸಿದ ವಾರಾಂತ್ಯ ಕರ್ಫ್ಯೂ ವಿನಿಂದಾಗಿ ಪುತ್ತೂರು ನಗರದಲ್ಲಿ ಶನಿವಾರ ಅಗತ್ಯ ವಸ್ತುಗಳ ಅಂಗಡಿ ಹೊರತುಪಡಿಸಿ ಉಳಿದಂತೆ ಸಂಪೂರ್ಣ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿತ್ತು. ದ್ವಿತೀಯ ಶನಿವಾರದ ಹಿನ್ನಲೆಯಲ್ಲಿ ಸರ್ಕಾರಿ ಕಚೇರಿ ಮತ್ತು ಬ್ಯಾಂಕ್ಗಳಿಗೂ ರಜೆಯಿತ್ತು. ರಸ್ತೆಗಳಲ್ಲಿ ಬೆರಳೆಣಿಕೆಯ ವಾಹನಗಳು ಓಡಾಟ ನಡೆಸುತ್ತಿದ್ದವು. ನಗರದಲ್ಲಿ ಜನಸಂಖ್ಯೆ ವಿರಳವಾಗಿತ್ತು.
ಬೆಳಗ್ಗಿನಿಂದಲೇ ಅವಶ್ಯಕ ಸಾಮಗ್ರಿಗಳ ಅಂಗಡಿಗಳ ಜೊತೆಗೆ ಇತರ ಸಣ್ಣ ಪುಟ್ಟ ಅಂಗಡಿಗಳು ತೆರೆದಿದ್ದವು. ಬೆಳಗ್ಗೆ ಸುಮಾರು 9 ಗಂಟೆಯ ವೇಳೆಗೆ ಪೊಲೀಸರು ಅವಶ್ಯಕ ವಸ್ತುಗಳ ಮಾರಾಟ ಅಂಗಡಿಗಳನ್ನು ಹೊರತುಪಡಿಸಿ ಇತರ ಅಂಗಡಿಗಳನ್ನು ಮುಚ್ಚಿಸಿದರು.
ಚಪ್ಪಲಿ, ಹಾರ್ಡ್ವೇರ್, ಮೊಬೈಲ್, ಜವುಳಿ ಮತ್ತು ಚಿನ್ನಾಭರಣ ಮಾರಾಟ ಮಳಿಗೆಗಳು ವಾರಾಂತ್ಯ ಕರ್ಫ್ಯೂ ನಿಯಮಾವಳಿಯಂತೆ ಬಂದ್ ಆಗಿದ್ದವು. ತರಕಾರಿ, ಹಣ್ಣು ಹಂಪಲು, ಮೀನು, ಮಾಂಸ, ದಿನಸಿ ಅಂಗಡಿಗಳು, ಹೋಟೆಲ್, ಬೇಕರಿ, ಹಾಲು ಮಾರಾಟ ಕೇಂದ್ರ, ಮೆಡಿಕಲ್ ಶಾಪ್ಗಳು ತೆರೆದಿದ್ದವು. ಕೆಸ್ಸಾರ್ಟಿಸಿ ಬಸ್ಸುಗಳು, ಕೆಲವೊಂದು ಖಾಸಗಿ ಬಸ್ಸುಗಳು, ಬೆರಳೆಣಿಕೆಯ ಅಟೋರಿಕ್ಷಾಗಳು ಟೂರಿಸ್ಟ್ ವಾಹನಗಳು, ದ್ವಿಚಕ್ರ ವಾಹನಗಳು ಓಡಾಟ ನಡೆಸುತ್ತಿತ್ತು. ಬಸ್ಸುಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಕೆಸ್ಸಾರ್ಟಿಸಿ ಬಸ್ಸುಗಳು ಪುತ್ತೂರು-ಸ್ಟೇಟ್ಬ್ಯಾಂಕ್, ಪುತ್ತೂರು-ಸುಳ್ಯ, ಪುತ್ತೂರು-ವಿಟ್ಲ, ಪುತ್ತೂರು-ಉಪ್ಪಿನಂಗಡಿ ನಡುವಣ 45 ನಿಮಿಷಗಳಿಗೊಮ್ಮೆ ಸಂಚರಿಸಿದವು. ಬಸ್ಸುಗಳಲ್ಲಿಯೂ ನಿರೀಕ್ಷಿತ ಸಂಖ್ಯೆಯ ಪ್ರಯಾಣಿಕರು ಇರಲಿಲ್ಲ.