ವಾರಾಂತ್ಯ ಕರ್ಫ್ಯೂ ಮಧ್ಯೆ ಉಡುಪಿ ಕೃಷ್ಣಮಠದಲ್ಲಿ ಹಗಲು ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಆರೋಪ
ಉಡುಪಿ, ಜ.15: ಕೊರೋನ ಭೀತಿ ಹಾಗೂ ವಾರಾಂತ್ಯ ಕರ್ಫ್ಯೂ ಮಧ್ಯೆ ಉಡುಪಿ ಕೃಷ್ಣ ಮಠದಲ್ಲಿ ಶನಿವಾರ ನಡೆದ ಹಗಲು ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದು, ಈ ಮೂಲಕ ಸರಕಾರದ ಕೋವಿಡ್ ನಿಯಮಾವಳಿ ಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜಿಲ್ಲಾದ್ಯಂತ ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳು ಹೊರತುಪಡಿಸಿ ಬಹುತೇಕ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ. ಜನ ಸಂಚಾರ ವಿರಳವಾಗಿರುವುದರಿಂದ ಹೆಚ್ಚಿನ ಬಸ್ಗಳು ಕೂಡಾ ಇಂದು ರಸ್ತೆಗೆ ಇಳಿದಿಲ್ಲ. ಆದರೆ ಬೆಳಗ್ಗೆ ರಥಬೀದಿಯಲ್ಲಿ ನಡೆದ ಹಗಲು ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿರುವುದು ಕಂಡುಬಂತು. ವಾರಾಂತ್ಯ ಕರ್ಫ್ಯೂ ಜಾರಿಯ ಮಧ್ಯೆ ಇಷ್ಟು ಸಂಖ್ಯೆಯಲ್ಲಿ ಜನ ಸೇರಿರುವುದು ಮತ್ತು ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಪಾಡದೆ ಹಿಂಡುಹಿಂಡಾಗಿ ಜನ ನೆರೆದಿರುವುದು ಸರಕಾರದ ಕೋವಿಡ್-19 ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆ ಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.