ತಾರಿಗುಡ್ಡೆ ವಾರ್ಡ್ಗೆ ಮೂಲಭೂತ ಸೌಕರ್ಯಗಳ ಕೊರತೆ: ಆರೋಪ
ಪುತ್ತೂರು, ಜು.23: ಪುತ್ತೂರು ನಗರಸಭೆಯ 7ನೆ ವಾರ್ಡ್ ಬಗ್ಗೆ ಸ್ಥಳೀಯ ಸದಸ್ಯ ಮಲತಾಯಿ ಧೋರಣೆ ತಾಳುತ್ತಿದ್ದು, ಇಲ್ಲಿನ ತಾರಿಗುಡ್ಡೆ ಪ್ರದೇಶದಲ್ಲಿ ಯಾಮದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಸ್ಥಳೀಯ ಸೌಹಾರ್ದ ಯುವಕ ಮಂಡಲದ ಗೌರವ ಅಧ್ಯಕ್ಷ ಅದ್ದು ಪಡೀಲ್ ಆರೋಪಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭಾ ವ್ಯಾಪ್ತಿಗೆ ಒಳಪಟ್ಟ ಚಿಕ್ಕಮುಡ್ನೂರು 7ನೆ ವಾರ್ಡ್ನ ಸದಸ್ಯರಾಗಿ ಅನ್ವರ್ ಖಾಸಿಂ 2 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ತಾರಿಗುಡ್ಡೆ ಪ್ರದೇಶದ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈ ಕ್ಷೇತ್ರಕ್ಕೆ ನಗರ ಸಭೆಯಿಂದ 1.16 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ ತಾರಿಗುಡ್ಡೆ ಪ್ರದೇಶಕ್ಕೆ ಯಾವುದೇ ಅನುದಾನವನ್ನು ಮೀಸಲಿಡದೆ ಇಲ್ಲಿನ ಮತದಾರರಿಗೆ ಅನ್ಯಾಯ ಎಸಗಿದ್ದಾರೆ. ಅಲ್ಲದೆ ತನ್ನ ಕ್ಷೇತ್ರಕ್ಕೆ 2.36 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಪತ್ರಿಕೆಯಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ.
ತಾನು ಈ ಬಗ್ಗೆ ಮಾಹಿತಿ ಹಕ್ಕು ಅಡಿಯಲ್ಲಿ ಎಲ್ಲಾ ಮಾಹಿತಿ ಪಡೆದುಕೊಂಡಿದ್ದೇನೆ. ಅನ್ವರ್ ಖಾಸಿಂ ಅವರು ತಾನು ಸದಸ್ಯರಾದ ಬಳಿಕ ತಾರಿಗುಡ್ಡೆ ಪ್ರದೇಶಕ್ಕೆ ಒಂದು ಬಾರಿಯೂ ಭೇಟಿ ನೀಡಿಲ್ಲ. ತಾರಿಗುಡ್ಡೆ ಪ್ರದೇಶದಲ್ಲಿ ರಸ್ತೆ ಸೌಕರ್ಯ, ಡ್ರೈನೇಜ್ ದಾರಿ ದೀಪದ ಸಮಸ್ಯೆಗಳು ಸೇರಿದಂತೆ ಹಲವಾರು ಮೂಲಭೂತ ಸಮಸ್ಯೆಗಳಿವೆ. ಅನ್ವರ್ ಖಾಸಿಂ ಅವರು ಇದೀಗ ತಾರಿಗುಡ್ಡೆ ತನ್ನ ವ್ಯಾಪ್ತಿಗೆ ಬರುತ್ತಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ತಮಗೆ ಗೊಂದಲ ಉಂಟಾಗಿದೆ. ಈ ಬಗ್ಗೆ ಇಲ್ಲಿನ ಸ್ಥಳೀಯರು ಉಪವಿಭಾಗಾಧಿಕಾರಿಗಳಿಗೆ, ನಗರ ಸಭಾ ಪೌರಾಯುಕ್ತರಿಗೆ ಹಾಗೂ ಅಧ್ಯಕ್ಷರಿಗೆ ಹಲವಾರು ಮನವಿಗಳನ್ನು ಸಲ್ಲಿಸಿದ್ದರೂ ಈ ತನಕ ಸಮಸ್ಯೆಗಳ ಪರಿಹಾರ ಮಾಡುವ ಪ್ರಯತ್ನಗಳು ನಡೆದಿಲ್ಲ ಎಂದು ಆರೋಪಿಸಿದ ಅವರು, ತಾರಿಗುಡ್ಡೆ ಪ್ರದೇಶವು ಯಾವ ಸದಸ್ಯರ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಅವರು ಬಹಿರಂಗಪಡಿಸಬೇಕು ಮತ್ತು ಅನ್ವರ್ ಖಾಸಿಂ ಅವರು ಸದಸ್ಯರಾದ ಬಳಿಕ ಮನೆ ಮತ್ತು ಜಮೀನು ಸೇರಿಂದಂತೆ ಕೋಟ್ಯಾಂತರ ರೂ.ಆಸ್ತಿ ಮಾಡಿಕೊಂಡಿದ್ದು ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸೌಹಾರ್ದ ಯುವಕ ಮಂಡಲದ ಅಧ್ಯಕ್ಷ ಮುಹಮ್ಮದ್ ತಾರಿಗುಡ್ಡೆ, ಕಾರ್ಯದರ್ಶಿ ತವೀದ್, ಸಾಲ್ಮರ ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷ ಸುನೀತ್ರಾಜ್ ಮತ್ತು ಸ್ಥಳೀಯರಾದ ಇಂದಿರಾ ಉಪಸ್ಥಿತರಿದ್ದರು.