ಚಿಣ್ಣರ ಮೇಳ ಸಮಾರೋಪ; ಪ್ರತಿ ವರ್ಷ ಚಿಣ್ಣರ ಮೇಳ ಆಯೋಜನೆ - ಸುನೀಲ್ ಕುಮಾರ್
ಕಾರ್ಕಳ : ಚಿಣ್ಣರ ಮೇಳ ಮಕ್ಕಳಲ್ಲಿ ಕಲೆಯ ಕುರಿತು ಆಸಕ್ತಿ ಮೂಡಿಸುವುದರ ಜೊತೆಗೆ ಆತ್ಮವಿಶ್ವಾಸ ತುಂಬುವ, ಮುಕ್ತವಾಗಿ ಎಲ್ಲರೊಂದಿಗೆ ಬೆರೆಯುವಂತೆ ಮಾಡುತ್ತದೆ. ನಮ್ಮೂರಿನ ಮಕ್ಕಳಿಗಾಗಿ ಪ್ರತಿವರ್ಷ ಮಕ್ಕಳ ಮೇಳ ಆಯೋಜಿಸಲಾಗುವುದು ಎಂದು ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಮೇ 15ರಂದು ಕೋಟಿ ಚೆನ್ನಯ ಥೀಮ್ ಪಾರ್ಕ್ನಲ್ಲಿ ನಡೆದ ಮಕ್ಕಳ ಚಿಣ್ಣರ ಮೇಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕಳೆದ 7 ದಿನಗಳಲ್ಲಿ ಮಕ್ಕಳು ಚಿಣ್ಣರ ಮೇಳದಲ್ಲಿ ಹತ್ತಾರು ಸಂಗತಿಗಳನ್ನು ಕಲಿತಿದ್ದಾರೆ. ಅವರ ಕಲಾ ಬದುಕಿಗೆ ಇಂತಹ ಶಿಬಿರಗಳು ತಳಹದಿಯಾಗಲಿದೆ ಎಂದು ಸುನೀಲ್ ಕುಮಾರ್ ಹೇಳಿದರು.
ಬದುಕಿನ ಪಾಠ - ಡಾ. ಸುಧಾಕರ್ ಶೆಟ್ಟಿ
ಚಿಣ್ಣರ ಮೇಳ ಮಕ್ಕಳಲ್ಲಿ ಸದಭಿರುಚಿ ಮೈಗೂಡಿಸುವುದರೊಂದಿಗೆ ಬದುಕಿನ ಪಾಠ ಕಲಿಸಿದೆ. ಸಚಿವ ಸುನೀಲ್ ಕುಮಾರ್ ಅವರ ಚಿಂತನೆ, ಯಕ್ಷರಂಗಾಯಣ ನಿರ್ದೇಶಕ ಜೀವನ್ ರಾಂ ಸುಳ್ಯ ಅವರ ನೇತೃತ್ವದಲ್ಲಿ ಚಿಣ್ಣರ ಮೇಳ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗ ಸಂಸ್ಕೃತಿ ಅಧ್ಯಕ್ಷ ನಿತ್ಯಾನಂ ಪೈ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಬಿರಗಳು ಸಹಕಾರಿ ಎಂದರು.
ಸನ್ಮಾನ
ಯಕ್ಷರಂಗಾಯಣ ನಿರ್ದೇಶಕ ಜೀವನ್ ರಾಂ ಸುಳ್ಯ ಅವರನ್ನು ಮಕ್ಕಳ ಪೋಷಕರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು. ಯಕ್ಷರಂಗಾಯಣ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿ, ಶಿಕ್ಷಕ ರಾಜೇಂದ್ರ ಭಟ್ ನಿರೂಪಿಸಿದರು. ಉದ್ಯಮಿ ಸುಶಾಂತ್ ವಂದಿಸಿದರು.