ಕಾಸರಗೋಡು : ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು
ಕಾಸರಗೋಡು : ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು 30 ಪವನ್ ಚಿನ್ನಾಭರಣ ಹಾಗೂ ನಾಲ್ಕು ಲಕ್ಷ ರೂ. ನಗದು ಕಳವುಗೈದ ಘಟನೆ ಬೇಕಲ ಠಾಣೆ ವ್ಯಾಪ್ತಿಯ ಪೂಚಕ್ಕಾಡ್ ಎಂಬಲ್ಲಿ ನಡೆದಿದೆ. ಮನೆಯವರ ಪ್ರಜ್ಞೆ ತಪ್ಪಿಸಿ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಪೂಚಕ್ಕಾಡ್ ಮುನೀರ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಮನೆಯ ಮೇಲಂತಸ್ತಿನ ಕಿಟಿಕಿ ಸರಳು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಕಪಾಟಿನಲ್ಲಿ ಇರಿಸಿದ್ದ ಚಿನಾಭರಣ ಮತ್ತು ನಗದು ಕಳವು ಮಾಡಿದ್ದಾರೆ. ಮುನೀರ್ ಹಾಗೂ ಮನೆಯವರು ಮಲಗಿದ್ದು, ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದೆ.
ದುಷ್ಕರ್ಮಿಗಳು ಪ್ರಜ್ಞೆ ತಪ್ಪಿಸುವ ರಾಸಾಯನಿಕ ವಸ್ತು ಸಿಂಪಡಿಸಿರಬಹುದು ಎಂದು ಶಂಕಿಸಲಾಗಿದೆ. ಸಾಮಾನ್ಯ ವಾಗಿ ಮುನೀರ್ ಮುಂಜಾನೆ 4 ಗಂಟೆಗೆ ಎದ್ದೇಳುತ್ತಿದ್ದು, ಇಂದು ಬೆಳಗ್ಗೆ ಎಂಟು ಗಂಟೆಗೆ ಎಚ್ಚರವಾಗಿದೆ. ಇದರಿಂದ ಪ್ರಜ್ಞೆ ತಪ್ಪಿಸುವ ರಾಸಾಯನಿಕ ಸ್ಪ್ರೇ ಮಾಡಿ ದುಷ್ಕರ್ಮಿಗಳು ಕೃತ್ಯ ನಡೆಸಿರಬಹುದು ಎಂದು ಸಂಶಯಿಸಲಾಗಿದೆ.
ಬೇಕಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.