ಕುಮಟಾ : ಪ್ರವಾಸಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಮುದ್ರಪಾಲು
ಕುಮಟಾ : ಪ್ರವಾಸಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿರುವ ಘಟನೆ ಕುಮಟಾ ತಾಲೂಕಿನ ಬಾಡದಲ್ಲಿ ಶನಿವಾರ ನಡೆದಿದೆ.
ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ 87 ಮಂದಿ ವಿದ್ಯಾರ್ಥಿಗಳ ತಂಡ ಕುಮಟಾ ಪ್ರವಾಸಕ್ಕೆ ಬಂದಿದ್ದು, ಕುಮಟಾದ ಬಾಡದಲ್ಲಿರುವ ಸಿಲ್ವರ್ ಸ್ಯಾಂಡ್ ರೆಸಾರ್ಟ್ಗೆ ಬಂದಿದ್ದ ವಿದ್ಯಾರ್ಥಿಗಳಲ್ಲಿ ಕೆಲವರು ಸಮುದ್ರಕ್ಕಿಳಿದು ಆಟವಾಡುತ್ತಿದ್ದರು. ಈ ವೇಳೆ ನಾಲ್ವರು ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಬೆಂಗಳೂರು ಮೂಲದ ಅರ್ಜುನ್, ಚೈತ್ರಶ್ರೀ, ತೇಜಸ್ ಡಿ., ಕಿರಣ್ ಕುಮಾರ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು, ಇದರಲ್ಲಿ ಅರ್ಜುನ್ ಹಾಗೂ ಚೈತ್ರಶ್ರೀ ಎಂಬವರ ಮೃತ ದೇಹ ಪತ್ತೆಯಾಗಿದೆ. ತೇಜಸ್ ಡಿ., ಕಿರಣ್ ಕುಮಾರ್ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಕುಮಟಾ ಠಾಣೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಸ್ಥಳೀಯರೊಂದಿಗೆ ಶೋಧಕಾರ್ಯ ನಡೆಸಿದ್ದಾರೆ.
ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.