ಅರಣ್ಯ ಹಕ್ಕು ಕಾಯಿದೆ ವೈಫಲ್ಯವಾಗಲು ಬಿಡೆವು: ಮಾಜಿ ಸಿಎಂ ಸಿದ್ಧರಾಮಯ್ಯ
ಶಿರಸಿ: ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯಿದೆ ವೈಫಲ್ಯವಾಗಲು ಬಿಡುವುದಿಲ್ಲ, ಅರಣ್ಯ ಭೂಮಿ ಮೇಲೆ ಅವಲಂಭಿತವಾಗಿರುವ ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕಿಗೆ ಸಂಬಂಧಿಸಿ ಎಲ್ಲಾ ರೀತಿಯ ಬದ್ಧತೆಗೆ ಬದ್ಧರಾಗಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಅವರು ಇಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಹಮ್ಮಿಕೊಂಡ ಅರಣ್ಯವಾಸಿಗಳನ್ನ ಉಳಿಸಿ- ಜಾಥದ ಅಂಗವಾಗಿ ಬೆಂಗಳೂರಿಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಆಗಮಿಸಿದ ಹೋರಾಟದ ವಾಹಿನಿ ವೀಕ್ಷಿಸುತ್ತಾ ಮೇಲಿನಂತೆ ಹೇಳಿದರು.
ಅರಣ್ಯ ಭೂಮಿ ಹಕ್ಕಿಗಾಗಿ ರಾಜ್ಯಾದ್ಯಂತ ಮೂರು ದಶಕದ ಹೋರಾಟದ ವೇದಿಕೆಯ ಕಾರ್ಯ ಶ್ಲಾಘನೀಯ. ಸಂಘಟನೆ ಮತ್ತು ಕಾನೂನಾತ್ಮಕ ಹೋರಾಟವನ್ನು ಜರುಗಿಸಿದ ಹೋರಾಟಗಾರರ ವೇದಿಕೆಯ ಹೋರಾಟವು ಇನ್ನೀತರ ಹೋರಾಟಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಹೋರಾಟಗಾರರ ವೇದಿಕೆ ಅಧ್ಯಕ್ಷ ರವಿಂದ್ರ ನಾಯ್ಕ ಅರಣ್ಯವಾಸಿಗಳನ್ನ ಉಳಿಸಿ ಎಂಬ ಜಾಥದ ವಿವರವನ್ನು ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ತಾಲೂಕ ವಿವಿಧ ಅಧ್ಯಕ್ಷರುಗಳಾದ ಭೀಮ್ಸಿ ವಾಲ್ಮೀಕಿ, ಶಿವಾನಂದ ಜೋಗಿ, ಲಕ್ಷ್ಮಣ ಮಾಳ್ಳಕ್ಕನವರ, ದೇವರಾಜ ಗೊಂಡ, ಸೀತಾರಾಮ ಗೌಡ, ಸುರೇಶ ಸಿದ್ಧಿ, ಬಾಬು ಗೌಳಿ, ರಾಜ್ಯದ ಪಧಾದಿಕಾರಿಗಳಾದ ರಾಮು ಕೊಡಗು, ಬೋರಯ್ಯ ಚಿತ್ರದುರ್ಗ, ಲಕ್ಷ್ಮಣ ವಾಲ್ಮೀಕಿ ಗದಗ, ಸಂಪತ್ ಕುಮಾರ್ ಬಳ್ಳಾರಿ ಮುಂತಾದ ೨೦೦ ಕ್ಕೂ ಹೇಚ್ಚು ಜನ ಭಾಗವಹಿಸಿದ್ದರು.
ಹೋರಾಟ ಮುಂದುವರೆಸಿ : ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಟ ರಾಜ್ಯಾದ್ಯಂತ ಪರಿಣಾಮಕಾರಿಯಾಗಿ ಮುಂದುವರೆಸಿ ಎಂದು ಸಿದ್ದರಾಮಯ್ಯ ಅವರು ಈ ಸಂದರ್ಭದಲ್ಲಿ ಹೇಳಿದರು.