ಉದಯಪುರದಲ್ಲಿ ಹತ್ಯೆ; ಜಂಇಯ್ಯತುಲ್ ಖುತಬಾ ಖಂಡನೆ, ಸಮಗ್ರ ತನಿಖೆಗೆ ಒತ್ತಾಯ
ಮಂಗಳೂರು: ರಾಜಸ್ತಾನದ ಉದಯಪುರದಲ್ಲಿ ಟೈಲರ್ ಒಬ್ಬರನ್ನು ಅಮಾನುಷವಾಗಿ ಕೊಲೆಗೈದ ಘಟನೆಯನ್ನು ಜಂ ಇಯ್ಯತುಲ್ ಖುತಬಾ ದ.ಕ. ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಪ್ರವಾದಿ ನಿಂದಕರನ್ನು ಸಮರ್ಥಿಸಿದ್ದಾರೆ ಎಂಬ ಕಾರಣಕ್ಕಾಗಿ ಕಾನೂನು ಕೈಗೈತ್ತಿಕೊಂಡ ಈ ನಾಮಧಾರಿಗಳು ನಡೆಸಿದ ಹತ್ಯೆಯು ಧರ್ಮಕ್ಕೆ ಮಸಿ ಬಳಿಯುವ ಕುಕೃತ್ಯವಾಗಿದ್ದು, ಇವರು ನೈಜ ಮುಸಲ್ಮಾನರಾಗಿರಲು ಸಾಧ್ಯವಿಲ್ಲ. ಅದೇ ರೀತಿ ಅಭಿವೃದ್ಧಿಯ ಯಾವುದೇ ಮಾನದಂಡವಿಲ್ಲದೇ ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟು ಅಧಿಕಾರಕ್ಕೆ ಬರಲು ಯಾವ ಹಂತಕ್ಕೆ ತಲುಪಲೂ ಹೇಸದ ರಾಜಕಾರಣಿಗಳು ಇರುವ ನಮ್ಮ ದೇಶದಲ್ಲಿ ಧರ್ಮದ ಹೆಸರಲ್ಲಿ ಇಂತಹ ಕೃತ್ಯಗಳು ಮರುಕಳಿಸುತ್ತಲೇ ಇವೆ. ಈ ಹಿಂದೆ ಕೂಡಾ ಶ್ರೀರಾಮನ ಹೆಸರಲ್ಲಿ, ಗೋವಿನ ಹೆಸರಲ್ಲಿ ಇಂತಹದೇ ಗುಂಪು ಹತ್ಯೆಗಳು ನಿರಂತರ ನಡೆದಿದ್ದು, ಆದ್ದರಿಂದ ಇಂತಹ ರಾಕ್ಷಸೀ ಕೃತ್ಯಗಳ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಹತ್ಯೆಗೈದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅದೇ ರೀತಿ ನಿಂದಿಸಿ ಕೋಮು ಪ್ರಚೋದನೆ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗುವವರನ್ನೂ ಜಾತಿ ಧರ್ಮದ ಹೆಸರಲ್ಲಿ ತಾರತಮ್ಯ ನೀತಿ ಅನುಸರಿಸದೇ ಶಿಕ್ಷೆಗೊಳಪಡಿಸಬೇಕೆಂದು ಜಂ ಇಯ್ಯತುಲ್ ಖುತಬಾ ಜಿಲ್ಲಾಧ್ಯಕ್ಷ ಎಸ್ ಬಿ ದಾರಿಮಿ ಹಾಗೂ ಪ್ರಧಾನ ಕಾರ್ಯದರ್ಶಿ ರಶೀದ್ ರಹ್ಮಾನಿ ಆಗ್ರಹಿಸಿದ್ದಾರೆ.