ಕುತ್ಯಾರು: ಸಾವಿನಲ್ಲೂ ಒಂದಾದ ದಂಪತಿ
ಶಿರ್ವ : ಪತ್ನಿ ಮೃತಪಟ್ಟ ಕೆಲವೇ ಗಂಟೆಗಳ ಅಂತರದಲ್ಲಿ ಪತಿ ಕೊನೆಯುಸಿರೆಳೆದು ಸಾವಿನಲ್ಲೂ ಒಂದಾದ ಘಟನೆ ಕುತ್ಯಾರು ಅಂಜಾರಿನಲ್ಲಿ ಬುಧವಾರ ನಡೆದಿರುವುದು ವರದಿಯಾಗಿದೆ.
ಪ್ರಗತಿಪರ ಕೃಷಿಕರಾಗಿದ್ದ ಕಿನ್ನಿಗೋಳಿ ಕೊಟ್ರಾಡಿ ರಾಮಣ್ಣ ಶೆಟ್ಟಿ (90) ಮತ್ತು ಕುತ್ಯಾರು ಅಂಜಾರು ಮನೆ ಶಾಂತಾ ಆರ್. ಶೆಟ್ಟಿ (85) ದಂಪತಿ ಕುತ್ಯಾರು ಅಂಜಾರುಮನೆಯಲ್ಲಿ ಮೃತ ಪಟ್ಟಿದ್ದಾರೆ.
ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ರಾಮಣ್ಣ ಶೆಟ್ಟಿ ಅವರು ವಯೋಸಹಜ ಕಾರಣಗಳಿಂದಾಗಿ ಅಸೌಖ್ಯಕ್ಕೊಳಗಾಗಿದ್ದು ಅವರ ಮಕ್ಕಳು ಮತ್ತು ಮನೆಯವರು ಮಂಗಳವಾರ ಸಂಜೆ ಕುಟುಂಬದ ಮೂಲಮನೆ ಕಿನ್ನಿಗೋಳಿ ಕೊಟ್ರಾಡಿಗೆ ಕರೆದೊಯ್ಯಲು ಮನೆಗೆ ಆ್ಯಂಬುಲೆನ್ಸ್ ತರಿಸಿದ್ದರು. ಆ್ಯಂಬುಲೆನ್ಸ್ ಶಬ್ದ ಕೇಳಿ ಪತ್ನಿ ಶಾಂತಾ ಶೆಟ್ಟಿ ಅವರು ಹೃದಯಾಘಾತಕ್ಕೊಳಗಾಗಿದ್ದರು. ಬಳಿಕ ಅದೇ ಆ್ಯಂಬುಲೆನ್ಸ್ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದರು.
ಮನೆಯವರು ಅವರ ಮೃತದೇಹವನ್ನು ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಿ ಬುಧವಾರ ಬೆಳಗ್ಗೆ ಮೃತದೇಹವನ್ನು ಮನೆಗೆ ತಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ರಾಮಣ್ಣ ಶೆಟ್ಟಿ ಅವರು ಕೂಡಾ ಅಸುನೀಗಿದ್ದಾರೆ. ಕುತ್ಯಾರು ಅಂಜಾರು ಮನೆಯಲ್ಲಿ ಇಬ್ಬರ ಮೃತದೇಹವನ್ನು ಒಂದೇ ಚಿತೆಯಲ್ಲಿ ಇರಿಸಿ ಅಂತಿಮ ಸಂಸ್ಕಾರ ನಡೆಸಲಾಗಿದೆ ಎಂದು ತಿಳಿದು ಬಂದಿದೆ.