ಭಟ್ಕಳ: ಆ. 15ರಂದು ತಂಝೀಮ್ ವತಿಯಿಂದ ಬೃಹತ್ ತಿರಂಗ ಬೈಕ್ ರ್ಯಾಲಿ
ಭಟ್ಕಳ: ದೇಶವು 75ನೇ ಸುವರ್ಣ ಮಹೋತ್ಸವ ಸಮಾರಂಭ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಟ್ಕಳ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಬೃಹತ್ ತಿರಂಗ ರ್ಯಾಲಿಯನ್ನು ಅ.15 ರ ಸಂಜೆ 4.30ಗಂಟೆಗೆ ಆಯೋಜಿಸಿರುವುದಾಗಿ ತಂಝಿಮ್ ಮುಖಂಡ ಇನಾಯತುಲ್ಲಾ ಶಾಬಂದ್ರಿ ಹೇಳಿದ್ದಾರೆ.
ಅವರು ರವಿವಾರ ಸಂಜೆ ತಂಝೀಮ್ ಕಾರ್ಯಲಯದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಈ ಮಾಹಿತಿ ನೀಡಿದರು.
ಅಂದು ಸಂಜೆ 4.30ಕ್ಕೆ ಸಾಗರ್ ರಸ್ತೆಯ ಆನಂದಾಶ್ರಮ ಕಾನ್ವೆಂಟ್ ಶಾಲಾ ಮೈದಾನದಿಂದ ಆರಂಭಗೊಳ್ಳುವ ಈ ಬೃಹತ್ ಬೈಕ್ ರ್ಯಾಲಿಯು ಶಮ್ಸುದ್ದೀನ್ ವೃತ್ತದ ಮೂಲಕ ಮುಖ್ಯರಸ್ತೆಯಲ್ಲಿ ಸಂಚರಿಸಿ ಸುಲ್ತಾನ್ ಸ್ಟ್ರೀಟ್ ಮಾರ್ಗವಾಗಿ ಚೌಕ್ ಬಝಾರ್, ಮುಹಮ್ಮದ್ ಅಲಿ ರೋಡ್, ಹೂವಿನ ಪೇಟೆ, ಚನ್ನಪಟ್ಟಣ ಹನುಮಂತ ದೇವಸ್ಥಾನ ರಸ್ತೆ, ಕಾರ್ ಸ್ಟ್ರೀಟ್ ಮಾರ್ಗವಾಗಿ ಚಲಿಸಿ ತಾಲೂಕು ಕ್ರೀಡಾಂಗಣದ ಮೈದಾನದಲ್ಲಿ ಮುಕ್ತಾಯವಾಗಲಿದೆ. ಅಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಸಮಾರಂಭದ ಸಂದೇಶವನನು ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಅಂದು ರಾತ್ರಿ 9ಗಂಟೆಗೆ ಹಳೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದು ಜಾಮಿಯಾ ಮಸೀದಿ ಚಿನ್ನದ ಪಳ್ಳಿಯ ಇಮಾಮ್ ಮತ್ತು ಖತೀಬ್ ಮೌಲಾನ ಅಬ್ದುಲ್ ಅಲೀಮ್ ಖತೀಬ್ ನದ್ವಿ ಹಾಗೂ ಅಲಿಮಿಯಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲಿಯಾಸ್ ನದ್ವಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಎರಡೂ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ತಂಝಿಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವಾಝ್, ಪುರಸಭಾ ಉಪಾಧ್ಯಕ್ಷ ಖೈಸರ್ ಮೊಹತೆಶಮ್, ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್, ಮುಹಮ್ಮದ್ ಸಾದಿಕ್ ಮಟ್ಟಾ ಮತ್ತಿತರರು ಉಪಸ್ಥಿತರಿದ್ದರು