ಅಪೂರ್ಣ ಕಾಮಗಾರಿ, ಯೋಜನೆಗಳು ಪೂರ್ಣಗೊಳಿಸಲು ಆದ್ಯತೆ: ನೂತನ ಮೇಯರ್ ಜಯಾನಂದ ಅಂಚನ್
ಮಂಗಳೂರು, ಸೆ.9: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಜಲಸಿರಿ, ಗೇಲ್ ಪೈಪ್ಲೈನ್, ರಸ್ತೆ ಕಾಮಗಾರಿಗಳು ಸೇರಿದಂತೆ ಅಪೂರ್ಣವಾಗಿರುವ ಕಾಮಗಾರಿಗಳು ಹಾಗೂ ಯೋಜನೆಗಳನ್ನು ಪೂರ್ಣಗೊಳಿಸಲು ನನ್ನ ಅವಧಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ.
ಪಾಲಿಕೆ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್ ಆಗಿ ಆಯ್ಕೆಯಾದ ಅವರು ಸುದ್ದಿಗಾರರ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ: ಮಂಗಳೂರು ಮನಪಾ ನೂತನ ಮೇಯರ್ ಆಗಿ ಜಯಾನಂದ ಅಂಚನ್ ಆಯ್ಕೆ
ಪಕ್ಷದ ಹಿರಿಯ ಸದಸ್ಯರು, ಮೇಯರ್ಗಳ ಮಾರ್ಗದರ್ಶನ, ಪಕ್ಷ ಹಾಗೂ ಪ್ರತಿಪಕ್ಷದ ನಾಯಕರು, ಸದಸ್ಯರ ಸಲಹೆಯ ಮೇರೆಗೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಜತೆಗೆ ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಗಮನ ಹರಿಸುತ್ತೇನೆ ಎಂದವರು ನುಡಿದರು.
ಮೇಯರ್ ಜತೆ ಸೇರಿ ಅಭಿವೃದ್ಧಿ ಕಾರ್ಯಕ್ಕೆ ಒತ್ತು: ಪೂರ್ಣಿಮಾ
ಮೇಯರ್ ಜತೆ ಸೇರಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಪಾಲಿಕೆಯ ಅಭಿವೃದ್ದಿ ಕಾರ್ಯಗಳಿಗೆ ಒತ್ತು ನೀಡುವುದಾಗಿ ನೂತನ ಉಪ ಮೇಯರ್ ಪೂರ್ಣಿಮಾ ಹೇಳಿದರು.
ಎಸೆಸೆಲ್ಸಿ ವಿದ್ಯಾರ್ಹತೆ ಹೊಂದಿರುವ 39ರ ಹರೆಯದ ಪೂರ್ಣಿಮಾ ಪಾಲಿಕೆಯಲ್ಲಿ ಎರಡನೆ ಅವಧಿಗೆ ಸದಸ್ಯರಾಗಿದ್ದಾರೆ. ಇದೀಗ ಮಹಾನಗರ ಪಾಲಿಕೆಯ 23ನೇ ಅವಧಿಯ ಉಪ ಮೇಯರ್ ಆಗಿ ಚುನಾವಣೆಯಲ್ಲಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ.
ಮೈಸೂರು ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ನೇತೃತ್ವದಲ್ಲಿ ಪಾಲಿಕೆ ಸಭಾಂಗಣದಲ್ಲಿ ಮೇಯರ್, ಉಪ ಮೇಯರ್ ಹಾಗೂ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆ ಬಳಿಕ ನೂತನ ಮೇಯರ್ ಹಾಗೂ ಉಪ ಮೇಯರ್ಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮಾಜಿ ಮೇಯರ್ಗಳು, ಪಾಲಿಕೆಯ ಸದಸ್ಯರು ನೂತನ ಮೇಯರ್ ಹಾಗೂ ಉಪ ಮೇಯರ್ಗೆ ಹೂಮಾಲೆ ಅರ್ಪಿಸಿ, ನುಡಿನಮನಗಳ ಮೂಲಕ ಅಭಿನಂದನೆ ಸಲ್ಲಿಸಿದರು.
ಮೇಯರ್ ಜಯಾನಂದ್ ಪರಿಚಯ:
ಕದ್ರಿ (ಪದವು) ವಾರ್ಡ್ನ ಸದಸ್ಯರಾದ 55ರ ಹರೆಯದ ಜಯಾನಂದ್ ಅಂಚನ್ ವೃತ್ತಿಯಲ್ಲಿ ಉದ್ಯಮಿಯಾಗಿದ್ದಾರೆ. ಕೆಪಿಟಿಯಲ್ಲಿ ಐಟಿಐ (ಇಲೆಕ್ಟ್ರಾನಿಕ್ಸ್) ಡಿಪ್ಲೊಮಾ ಪಡೆದಿರುವ ಇವರ ಪತ್ನಿ ವೇದಶ್ರೀ ಗೃಹಿಣಿಯಾಗಿದ್ದಾರೆ. ಹಿಂದೆ ಬಿಜೆಪಿ ವಾರ್ಡ್ ಅಧ್ಯಕ್ಷನಾಗಿಯೂ ಕಾರ್ಯ ನಿರ್ವಹಿಸಿರುವ ಜಯಾನಂದ ಅಂಚನ್ ಪಾಲಿಕೆಯಲ್ಲಿ ಪ್ರಸಕ್ತ ದ್ವಿತೀಯ ಅವಧಿಗೆ ಸದಸ್ಯರಾಗಿದ್ದಾರೆ. ಸತತ ಮೂರು ಬಾರಿ ಪಾಲಿಕೆ ಸದಸ್ಯರಾಗಿ ಚುನಾವಣೆ ಎದುರಿಸಿರುವ ಜಯಾನಂದ ಅಂಚನ್, ಎರಡು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.