ಭಟ್ಕಳದ ಅಂಜುಮನ್ ನೂರ್ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಸ್ವಚ್ಚತಾ ಸಂಕಲ್ಪ ಮೆರವಣಿಗೆ
ಭಟ್ಕಳ: ಅಂಜುಮನ್ ಹಾಮಿಯೆ ಮಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ನೂರ್ ಮಾಂಟೆಸ್ಸರಿ ಮತ್ತು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇಂಡಿಯನ್ ಸ್ವಚ್ಛತಾ ಲೀಗ್ ಹಾಗೂ ಭಟ್ಕಳ ಪುರಸಭೆಯ ಸಹಯೋಗದಲ್ಲಿ ಸ್ವಚ್ಚತಾ ಸಂಕಲ್ಪ ಮೆರವಣಿಗೆ ನಡೆಸಿದರು.
ಭಟ್ಕಳದಲ್ಲಿ ಕಸ ಮುಕ್ತ ಬೀದಿಗಳು, ಮನೆಗಳು ಮತ್ತು ಪ್ರವಾಸಿ ಸ್ಥಳಗಳನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಸ್ವಚ್ಛತೆಯ ಮನೋಭಾವ ಮೂಡಿಸಲು “ಸ್ವಚ್ಚತಾ ಸಂಕಲ್ಪ” ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಅಂಜುಮನ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಿದ್ದೀಕ್ ಸ್ವಚ್ಚತಾ ಸಂಕಲ್ಪ ಮೆರವಣಿಗೆಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಘಾಟಿಸಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಿರ್ದೇಶನದಂತೆ 'ಆಝಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ ಹದಿನೈದು ದಿನಗಳ ಕಾಲ ಭಟ್ಕಳ ಸುತ್ತಮುತ್ತ ಸ್ವಚ್ಚತೆಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ವಿದ್ಯಾರ್ಥಿಗಳು ಘೋಷಣಾ ಫಲಕಗಳನ್ನ ಹಿಡಿದು ಬಜಾರ್ ರಸ್ತೆ ಮತ್ತು ಪುರಸಭೆ ಎದುರು ಮೆರವಣಿಗೆ ನಡೆಸಿದರು. ಪುರಸಭೆ ಮುಂಭಾಗದಲ್ಲಿ ಅಂಜುಮನ್ ಪಿಯು ಕಾಲೇಜು ವಿದ್ಯಾರ್ಥಿಗಳು ಸ್ವಚ್ಚತೆಯ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.
ಪುರಸಭೆ ಮುಖ್ಯಾಧಿಕಾರಿ ಸುರೇಶ್, ಆರೋಗ್ಯ ನಿರೀಕ್ಷಕಿ ಸೋಜಿಯ ಸೋನಂ, ಅಂಜುಮನ್ ಪ್ರಾಥಮಿಕ ಶಾಲೆ ಆಡಳಿತ ಮಂಡಳಿ ಕಾರ್ಯದರ್ಶಿ ಅಸಿಫ್ ದಾಮುದಿ, ಪದವಿ ಪೂರ್ವಕಾಲೇಜು ಪ್ರಾಂಶುಪಾಲ ಯೂಸುಫ್ ಕೋಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.