ಬಂಟ್ವಾಳ: ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ
ಮಂಗಳೂರು, ಆ.12: 2016-17ನೆ ಸಾಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಹೊಸದಾಗಿ 1ನೆ ತರಗತಿಗೆ ಪ್ರವೇಶ ಪಡೆದ ಹಾಗೂ ಹಿಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಅಂತರ್ಜಾಲ (ಆನ್ಲೈನ್)ದಲ್ಲಿ ನೋಂದಣಿ ಮಾಡದಿರುವ ವಿದ್ಯಾರ್ಥಿಗಳು ಮಾತ್ರ ಪ್ರಸ್ತುತ ಸಾಲಿನಲ್ಲಿ ಇಲಾಖಾ ವೆಬ್ಸೈಟ್ www.sw.kar.nic.inನಲ್ಲಿ ಅರ್ಜಿ ಸಲ್ಲಿಸಬೇಕು. ಬೇರೆ ಶಾಲೆಯಿಂದ ವರ್ಗಾವಣೆಗೊಂಡು ದಾಖಲಾಗಿರುವ ವಿದ್ಯಾರ್ಥಿಗಳ ವಿವರವನ್ನು ನಿಗದಿತ ನಮೂನೆಯನ್ನು ಈ ಕಚೇರಿಯಿಂದ ಪಡೆದು ಭರ್ತಿ ಮಾಡಿ ಆಯಾಯ ಶಾಲಾ ಮುಖ್ಯೋಪಾಧ್ಯಾಯರು, ಸಹಾಯಕ ನಿರ್ದೆಶಕರ ಕಚೇರಿ(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಬಂಟ್ವಾಳ ತಾಲೂಕು, ಬಿ.ಸಿ.ರಸ್ತೆ, ಇಲ್ಲಿಗೆ ನೀಡಬೇಕೆಂದು ಪ್ರಕಟನೆ ತಿಳಿಸಿದೆ.
ಅರ್ಜಿದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಪೋಷಕರ ವಾರ್ಷಿಕ ಆದಾಯ ಮಿತಿ ರೂ.2 ಲಕ್ಷದ ಒಳಗಿರಬೇಕು. (ಸರಕಾರಿ/ಖಾಸತಿ ನೌಕರರಾಗಿದ್ದಲ್ಲಿ ಇತ್ತೀಚಿನ ವೇತನ ದೃಢಪತ್ರ ನೀಡಬೇಕಾಗುತ್ತದೆ). ಕರ್ನಾಟಕ ರಾಜ್ಯದವರಾಗಿರಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ವಿದ್ಯಾರ್ಥಿಗಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಖಾತೆ ಹೊಂದಿರಬೇಕು ಮತ್ತು ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು. ವಿದ್ಯಾರ್ಥಿಯು ಯಾವುದೇ ವಿದ್ಯಾರ್ಥಿನಿಲಯದಲ್ಲಿ ವಾಸ್ತವ್ಯವಿರಬಾರದು. ಆಧಾರ್ ಕಾರ್ಡ್ ಹೊಂದಿರಬೇಕು.
2016-17ನೆ ಸಾಲಿನಲ್ಲಿ ನವೀಕರಣ/ಹೊಸತು ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರವು ಆರ್ಡಿ ನಂಬ್ರ ಹೊಂದಿರಬೇಕು. ಹಳೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಂತರ್ ಜಾಲದಲ್ಲಿ ಸ್ವೀಕೃತವಾಗುವುದಿಲ್ಲ ವೆಬ್ಸೈಟ್ನಲ್ಲಿ ವಿದ್ಯಾರ್ಥಿ/ಪೋಷಕರಿಗೆ ಹಾಗೂ ಮುಖ್ಯೋಪಾದ್ಯಾಯರಿಗೆ ಸೂಚನೆಗಳಿದ್ದು ಇದನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವಂತೆ ಪ್ರಕಟನೆ ತಿಳಿಸಿದೆ.