ಮೂಡುಬಿದಿರೆಯ ಮಿಶೆಲ್ ಕ್ವೀನಿ ಡಿ’ಕೋಸ್ತಾರಿಗೆ ಡಿಆರ್ಐ ಶೌರ್ಯ ಪ್ರಶಸ್ತಿ
ಮೂಡುಬಿದಿರೆ: ರೆವೆನ್ಯೂ ಇಂಟೆಲಿಜೆನ್ಸ್ ನಿರ್ದೇಶನಾಲಯದ ಮುಂಬೈ ಪ್ರಾಂತೀಯ ಘಟಕದ ಉಪ ನಿರ್ದೇಶಕಿ, ಮೂಡುಬಿದಿರೆಯ ನೀರುಡೆ ಮೂಲದ ಮಿಶೆಲ್ ಕ್ವೀನಿ ಡಿ’ಕೋಸ್ತಾ ಅವರಿಗೆ ಹೊಸದಿಲ್ಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2022ರ ಸಾಲಿನ ಡಿಆರ್ಐ ಶೌರ್ಯ ಪ್ರಶಸ್ತಿ ಪ್ರದಾನ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ವರ್ಷ ಕಸ್ಟಮ್ಸ್ ತಂಡದ ಕಾರ್ಯಾಚರಣೆ ವೇಳೆ ನೈಜೀರಿಯಾ ಪ್ರಜೆಗಳು ಸಾಗಾಟ ಮಾಡುತ್ತಿದ್ದ 1.9 ಕೆಜಿ ತೂಕದ ಮಾದಕ ದ್ರವ್ಯದ ಮಾತ್ರೆಗಳ ಸಹಿತ ನಾಲ್ಕನೇ ಮಹಡಿಯಿಂದ ಜಿಗಿದು ಪರಾರಿಯಾಗಲೆತ್ನಿಸಿದ ವೇಳೆ ಜೀವದ ಹಂಗು ತೊರೆದು ಏಕಾಂಗಿಯಾಗಿ ಅವರ ಬೆಂಬತ್ತಿ ದೈಹಿಕವಾಗಿ ಅಡ್ಡಗಟ್ಟಿ, ಕಾರ್ಯಾಚರಣೆ ತಂಡ ಬರುವವರೆಗೆ ಹಿಡಿದಿಟ್ಟುಕೊಳ್ಳುವಲ್ಲಿ ಮಿಶೆಲ್ ಅವರು ಯಶಸ್ವಿಯಾಗಿದ್ದರು.
ಮಿಶೆಲ್ ನೀರುಡೆ ಪ್ರಗತಿ ಪರ ಕೃಷಿಕ ಲಾಝರಸ್ ಡಿಕೋಸ್ತಾ ಅವರ ಪುತ್ರಿ. 2015ರ ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 387ನೇ ರ್ಯಾಂಕ್ ನೊಂದಿಗೆ ಉತ್ತೀರ್ಣರಾಗಿದ್ದರು. ಅದೇ ವರ್ಷ ಜಿಎಸ್ಟಿ ಅಸಿಸ್ಟೆಂಟ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ.